ವಿಜಯಸಾಕ್ಷಿ ಸುದ್ದಿ, ಗದಗ: ಕೆ.ಎಸ್.ಎಫ್.ಸಿ.ಯಿಂದ ಸಾಲ ಸೌಲಭ್ಯಗಳನ್ನು ಪಡೆದುಕೊಂಡು ಸಾಕಷ್ಟು ಉದ್ದಿಮೆದಾರರು ಯಶಸ್ವಿ ಉದ್ಯಮಿಗಳಾಗಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳು ಆಗುತ್ತಿವೆ. ಹಿಂದಿನ ಕಾಲದಲ್ಲಿ ಸೈಕಲ್ ಮೇಲೆ ಅಡ್ಡಾಡಿ ಸಾಲ ವಸೂಲಿ ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಉದ್ದಿಮೆದಾರರು ಜಾಗೃತಿ ಹೊಂದುವ ಮೂಲಕ ಸಾಲದ ಮರುಪಾವತಿಯನ್ನು ಸರಿಯಾಗಿ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಸಾಕಷ್ಟು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳು ದೊರೆಯುವದರಿಂದ ಉದ್ಯಮಗಳು ಬೆಳವಣಿಗೆಯತ್ತ ಸಾಗುತ್ತಿವೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಶಾಖಾ ವ್ಯವಸ್ಥಾಪಕ ಎ.ವ್ಹಿ. ಕಾಳಪ್ಪನವರ ಹೇಳಿದರು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಲಿಂ. ಲಕ್ಷ್ಮಣ ರಾವ್ ಅನಂತ ಪೊತ್ನೀಸ, ಲಿಂ. ಶಿವಪ್ಪ ಮರಿತಮ್ಮಪ್ಪ ನಿಲೂಗಲ್, ಲಿಂ. ಗುಡ್ಡಪ್ಪ ಸಣ್ಣನಿಂಗಪ್ಪ ಹೆಗಡಿಕಟ್ಟಿ, ಲಿಂ. ವಿರುಪಾಕ್ಷಪ್ಪ ತೋಟಪ್ಪ ಪಟ್ಟಣಶೆಟ್ಟಿ, ದಿ. ಚಂದನಮಲ್ ಗುಲಾಬಚಂದ ಬಾಗಮಾರ ಇವರುಗಳ ಸ್ಮಾರಕ ದತ್ತಿ ಉಪನ್ಯಾಸದ ನಿಮಿತ್ತ ಕೈಗಾರಿಕೋದ್ಯಮಿಗಳಿಗೆ ಕೆ.ಎಸ್.ಎಫ್.ಸಿ.ಯಿಂದ ದೊರೆಯುವ ಸೌಲಭ್ಯಗಳ ಕುರಿತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂಡಸ್ಟ್ರಿಯಲ್ ಉಪ ಸಮಿತಿ ಚೇರಮನ್ ಮದುಸೂಧನ ಡಿ.ಪುಣೇಕರ ಸ್ವಾಗತಿಸಿದರು. ಪ್ರಸ್ತಾವಿಕ ಹಾಗೂ ಲಿಂಗೈಕ್ಯರಾದ ಮಹನೀಯರ ಪರಿಚಯವನ್ನು ದತ್ತಿ ಉಪನ್ಯಾಸ ಉಪಸಮಿತಿ ಚೇರಮನ್ ಚಂದ್ರು ಬಾಳಿಹಳ್ಳಿಮಠ ಮಾಡಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ. ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಉಪಾಧ್ಯಕ್ಷ ವಿಜಯಕುಮಾರ ಎಸ್.ಮಾಟಲದಿನ್ನಿ ವಂದಿಸಿದರು.
ವೇದಿಕೆಯಲ್ಲಿ ಕೆ.ಎಸ್.ಎಫ್.ಸಿ. ಸಹಾಯಕ ವ್ಯವಸ್ಥಾಕರಾದ ಎಮ್.ಎ. ತಹಸೀಲ್ದಾರರನ್ನು ಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು ಹಾಗೂ ಉದ್ದಿಮೆದಾರರು ಪಾಲ್ಗೊಂಡಿದ್ದರೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಅಶೋಕಗೌಡ ಕೆ.ಪಾಟೀಲ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ತಾತನಗೌಡ ಎಸ್.ಪಾಟೀಲ ಮಾತನಾಡುತ್ತಾ, ಉದ್ಯಮಗಳನ್ನು ಪ್ರಾರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಸಾಕಷ್ಟು ಹಣಕಾಸಿನ ಸೌಲಭ್ಯಗಳನ್ನು ಒದಗಿಸುತ್ತಿವೆ. ಅದರಂತೆ ಉದ್ಯಮಗಳು ಕೂಡಾ ದೇಶದ ಅಭಿವೃದ್ಧಿಗೆ ಕೈಜೋಡಿಸುತ್ತಿವೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಕಡಿಮೆ ಬಡ್ಡಿ ದರದಲ್ಲಿ ಸಾಲಭ್ಯಗಳನ್ನು ಒದಗಿಸುತ್ತಿವೆ. ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.