ಉಡುಪಿ: ಮೊನ್ನೆಯಷ್ಟೆ ಬಾಲಿವುಡ್ ಚೆಲುವೆ ಸ್ಟಾರ್ ನಟಿ ಶಿಲ್ಪಾ ಶೆಟ್ಟಿ ಉಡುಪಿ ಜಿಲ್ಲೆಯ ಕಾಪು ಹೊಸ ಮಾರಿಗುಡಿಗೆ ಭೇಟಿ ಕೊಟ್ಟು ಮಾರಿಯಮ್ಮನ ದರ್ಶನ ಮಾಡಿದ್ದರು. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಪು ಶ್ರೀ ಹೊಸ ಮಾರಿಗುಡಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಮಾರಿಯಮ್ಮನ ಗದ್ದುಗೆ ಪ್ರತಿಷ್ಠಾಪನೆಯಲ್ಲಿ ಶಿವಕುಮಾರ್ ಭಾನುವಾರ ಭಾಗಿಯಾದರು. ಕಾಪು ಶ್ರೀ ಹಳೆ ಮಾರಿಗುಡಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಾರಿಗುಡಿ ಗದ್ದುಗೆ ಪ್ರತಿಷ್ಠಾಪನಾ ಕಾರ್ಯಕ್ರಮ ಬೆಳಗ್ಗೆ 11:30 ಕ್ಕೆ ನಡೆಯಿತು.
ಕಾಪು ಮಾರಿಗುಡಿಯಲ್ಲಿರುವ ಉಚ್ಚಂಗಿ ದೇವಿಯ ದರ್ಶನ ಮಾಡಿದರು. ಕೆಂಪು ಕಲ್ಲಿನಿಂದ ನಿರ್ಮಾಣ ಆಗಿರುವ ದೇಗುಲ ವೀಕ್ಷಿಸಿದರು. ಬಾಗಲಕೋಟೆಯ ಇಳಕಲ್ನ ವಿಶಿಷ್ಟ ಕೆಂಪು ಕಲ್ಲಿನ ದೇಗುಲ ಇದಾಗಿದೆ. ಸುಮಾರು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗಿರುವ ಹೊಸ ಮಾರಿಗುಡಿ ಇದು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕಾಪು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸನ್ಮಾನಿಸಿದರು. ಕಾಪು ಮಾರಿಯಮ್ಮನ ಮೂರ್ತಿ, ಪ್ರಸಾದ ನೀಡಿ ಗೌರವಿಸಿದರು.