ನೀರಿಲ್ಲದೆ ಸ್ವಚ್ಛತೆ ಕಾಪಾಡುವುದು ಹೇಗೆ?
ವಿಜಯಸಾಕ್ಷಿ ಸುದ್ದಿ, ಅಳವಂಡಿ
ಅಳವಂಡಿ ಹೊಬಳಿಯ ಕವಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡುಗೇರಿ ಗ್ರಾಮದ ಜನತಾ ಕಾಲನಿಯಲ್ಲಿ ಕೊರೊನಾದಿಂದ ಕಂಗಾಲಾದ ಜನತೆಗೆ ನೀರಿನ ಸಮಸ್ಯೆಯೂ ತಲೆನೋವಾಗಿ ಕಾಡುತ್ತಿದೆ.
ಗುಡಿಗೇರಿಯು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೊನೆಯ ಗ್ರಾಮವಾಗಿದ್ದು, ಜನತಾ ಕಾಲನಿಯಲ್ಲಿ ೫೦ಕ್ಕೂ ಹೆಚ್ಚು ಮನೆಗಳಿವೆ. ಸುಮಾರು ೮ ದಿನಗಳಿಂದ ನೀರು ಬಂದಿಲ್ಲ.
ನೀರು ಸರಬರಾಜು ಸರಿಯಾಗಿ ಆಗದಿರುವುದರಿಂದ ತುಂಬ ಸಮಸ್ಯೆ ಎದುರಿಸುತ್ತಿದ್ದೇವೆ. ಮುಸುರೆ ತೊಳೆದರೆ ಬಟ್ಟೆ ಒಗೆಯಲು ಆಗುವುದಿಲ್ಲ, ಬಟ್ಟೆ ಒಗೆದರೆ ಸ್ನಾನಕ್ಕೆ ನೀರು ಇರುವುದಿಲ್ಲ. ಈ ಕಾಲನಿಯಲ್ಲಿ ವಯಸ್ಸಾದವರು ಇದ್ದಾರೆ, ತವರು ಮನೆಗೆ ಬಾಣಂತಿ ಆರೈಕೆಗೆ ಬಂದವರಿದ್ದಾರೆ. ಆದರೆ, ನೀರು ಪೂರೈಕೆಯೇ ಸಮರ್ಪಕವಾಗಿಲ್ಲ. ವಾಟರ್ ಮ್ಯಾನ್ ನೀರು ಬಿಟ್ಟು ಮನೆಗೆ ಹೊಗುತ್ತಾನೆ. ನೀರು ಬಂದಿದೆಯೇ ಇಲ್ಲವೇ ಎನ್ನುವುದನ್ನು ಗಮನಿಸುವುದಿಲ್ಲ. ಸರಿಯಾಗಿ ಕೆಲಸ ಮಾಡುವುದಿಲ್ಲ. ನೀರು ಬಂದಿರುವುದಿಲ್ಲ ಎಂದು ಕೇಳಿದರೆ ಕರೆಂಟ್ ಇಲ್ಲ, ನೀರು ಸಂಜೆ ಬರುತ್ತೆ, ಮೋಟರ್ ಸುಟ್ಟಿದೆ ಎನ್ನುವ ಕಾರಣ ಹೇಳುತ್ತಾನೆ ಎಂದು ಗ್ರಾಮಸ್ಥರು ದೂರಿದರು.
ನೀರು ಕೊಟ್ಟರೆ ಸಾಕು
ಇನ್ನು, ಜನಪ್ರತಿನಿಧಿಗಳೂ ಕೈಗೆ ಸಿಗುವುದಿಲ್ಲ. ಬಾಣಂತಿಯ ಬಟ್ಟೆಗಳನ್ನು ತೊಳೆಯಲು ಹಳ್ಳಕ್ಕೆ ಹೊತ್ತುಕೊಂಡು ಹೊಗಬೇಕು. ಇಲ್ಲಿ ನೀರು ಬರದೇ ಇದ್ದರೆ, ಕೆರೆಗಳಿಗೆ ನೀರು ತರಲು ಹೊಗುತ್ತೇವೆ. ಮಳೆ ಬಂದರೆ ಅದನ್ನು ತರಲಾಗದು. ಕೆರೆಯ ದಾರಿ ಕೆಸರಾಗಿ ನಡೆಯದಂತಾಗುತ್ತದೆ. ಆರೋಗ್ಯ ಇಲಾಖೆಯವರು ಕೊರೊನಾ ಇದೆ, ಸ್ವಚ್ಛತೆ ಕಾಪಾಡಿ ಎನ್ನುತ್ತಾರೆ.
ಬರುವ ನೀರಿನಲ್ಲಿ ಹೇಗೆ ಸ್ವಚ್ಛತೆ ಕಾಪಾಡಿಕೊಳ್ಳುವುದೆಂದು ನಮಗೆ ತಿಳಿಯುತ್ತಿಲ್ಲ. ಚಿಕ್ಕ ಮಕ್ಕಳು, ವಯಸ್ಸಾದವರು, ಬಾಣಂತಿಯರು, ಬಸುರಿಯರು ಇದ್ದಾರೆ. ನಮಗೆ ಸಿ.ಸಿ. ರಸ್ತೆ ಬೇಡ, ಯಾವ ಸೌಲಭ್ಯವೂ ಬೇಡ. ಮೊದಲು ಸರಿಯಾಗಿ ನೀರು ಕೊಡಿ. ಇಂತಹ ದುಃಸ್ಥಿತಿಯಲ್ಲಿ ಜೀವನ ಸಾಗಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾ ಪಂಚಾಯತ್ ಕ್ಷೇತ್ರವಾದರೂ ಸಮಸ್ಯಗಳು ತಪ್ಪಲಿಲ್ಲವೆಂದು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ನೀರಿನ ವ್ಯವಸ್ಥೆ ಮಾಡುತ್ತೇವೆ
ನೀರಿನ ಸಮಸ್ಯೆಯನ್ನು ಸರಿಪಡಿಸಲು ಕ್ರಮ ತೆಗೆದುಕೊಂಡಿದ್ದೇವೆ. ಈಗಲೇ ನೀರು ಬಿಡಲು ವಾಟರ್ ಮ್ಯಾನ್ಗೆ ತಿಳಿಸಿದ್ದೇನೆ. ಸಂಪೂರ್ಣ ಸರಿಯಾದ ನೀರಿನ ವ್ಯವಸ್ಥೆ ಮಾಡುತ್ತೇವೆ.
- ಜ್ಯೋತಿ ಮಹಾಂತಯ್ಯ ಸಿಂಧೋಗಿಮಠ
ಗ್ರಾ.ಪಂ. ಅಧ್ಯಕ್ಷೆ, ಕವಲೂರು
ಎಂಟು ದಿನವಾಯಿತು
ಸರಿಯಾಗಿ ನೀರು ಬರುವುದಿಲ್ಲ. ಈಗ ೮ ದಿನವಾಯಿತು. ನೀರು ಬಂದಿಲ್ಲ. ಬಾಣಂತಿ ಮನೆಯವರು ನೀರು ಬಾರದೆ ಹಳ್ಳಕ್ಕೆ ಬಟ್ಟೆ ತೆಗೆದುಕೊಂಡು ಹೋಗಿದ್ದಾರೆ. ಕೊರೊನಾಗಿಂತ ನೀರಿನ ಸಮಸ್ಯೆ ನಮ್ಮನ್ನು ಬಹಳವಾಗಿ ಕಾಡುತ್ತಿದೆ.
- ದೇವಮ್ಮ, ಗುಡಗೇರಿ ಗ್ರಾಮಸ್ಥೆ