ವಿಜಯಸಾಕ್ಷಿ ಸುದ್ದಿ, ಗದಗ: ಕೆರೆ-ಕಟ್ಟೆಗಳು ಜನರ ಹಾಗೂ ಜಾನುವಾರುಗಳ ಜೀವನಾಡಿ. ಅವುಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡಬೇಕಿದೆ ಎಂದು ಕಳಸಾಪೂರ-ಮಲ್ಲಸಮುದ್ರ-ಸೊರಟೂರಿನ ಓಂಕಾರೆಶ್ವರ ಹಿರೇಮಠದ ಶ್ರೀ ಫಕ್ಕೀರೇಶ್ವರ ಪಟ್ಯಾಧ್ಯಕ್ಷರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗದಗ ತಾಲೂಕು ಹುಯಿಲಗೋಳ ಗ್ರಾ.ಪಂ ಮತ್ತು ಕೆರೆ ಅಭಿವೃದ್ಧಿ ಸಮಿತಿ ಸಹಯೋಗದಿಂದ ‘ನಮ್ಮೂರು-ನಮ್ಮ ಕೆರೆ’ ಯೋಜನೆಯಡಿ ಹೂಳು ತೆಗೆಯುವ ಕಾಮಗಾರಿಗೆ ಚಾಲನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಗ್ರಾಮಗಳಲ್ಲಿನ ಕೆರೆ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಕೆರೆ ಸಂರಕ್ಷಣೆಯು ಭೂಮಿಯ ಮೇಲಿನ ಎಲ್ಲಾ ಪ್ರಾಣಿ-ಪಕ್ಷಿಗಳಿಗೂ, ಮನುಷ್ಯರಿಗೂ ಅನುಕೂಲಕರವಾಗಿದ್ದು, ಮುಂದಿನ ಪೀಳಿಗೆಗೆ ಅದನ್ನು ಸಂರಕ್ಷಣೆ ಮಾಡುವುದು ಮತ್ತು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೋಶ್ರೀ ಹೇಮಾವತಿ ಅಮ್ಮನವರು ಕೆರೆ ಸಂರಕ್ಷಣೆಯ ಮೂಲಕ ರಾಜ್ಯದಲ್ಲಿ ಈಗಾಗಲೇ 803 ಕೆರೆಗಳ ಕಾಮಗಾರಿ ನೆರವೇರಿಸಿದ್ದಾರೆ. ಪೂಜ್ಯ ವೀರೇಂದ್ರ ಹೆಗ್ಗಡೆ ಅವರು ದೀಪದಂತೆ. ತಾವು ಬೆಂಕಿಯಲ್ಲಿ ಉರಿಯುತ್ತಾ ಇತರರಿಗೆ ಬೆಳಕನ್ನು ನೀಡುವ ಮನಸ್ಸು ಎಂದು ಬಣ್ಣಿಸಿದರು.
ಗದಗ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿ ಮಲ್ಲಯ್ಯ ಚನ್ನಬಸಪ್ಪ ಕೊರವಣ್ಣನವರ ಮಾತನಾಡಿ, ಕೃಷಿ ಇಲಾಖೆಯಿಂದಲೂ ರೈತರಿಗೆ ಕೃಷಿ ಹೊಂಡಗಳನ್ನು ಮಾಡಿಕೊಡಲಾಗುತ್ತದೆ. ಈ ಕೆರೆ ಕಾಮಗಾರಿ 3-4 ಗ್ರಾಮದ ರೈತರಿಗೆ ಕುಡಿಯಲು ಹಾಗೂ ಪ್ರಾಣಿ-ಪಕ್ಷಿಗಳಿಗೆ ಅನುಕೂಲವಾಗಿವೆ ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಚಂದ್ರಶೇಖರ್ ಹುಣಸಿಕಟ್ಟಿ ಮಾತನಾಡಿ, ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಹಾಗೂ ಮಾತೋಶ್ರೀ ಹೇಮಾವತಿ ಹೆಗ್ಗಡಿಯವರಿಗೆ ಗ್ರಾಮದ ಪರವಾಗಿ ಅಭಿನಂದನೆಗಳು ಸಲ್ಲಿಸಿ, ‘ಗೋದಪ್ಪನ ಕೆರೆಯ ನೀರು ತೆರೆದಿಬ್ಬದ ಜೋಳದ ರೊಟ್ಟಿ’ ಬಹು ಕಾಲದ ನೀಲವ್ವ ಹೆಣ್ಣು ಮಗಳ ಬಯಕೆಯ ಬುತ್ತಿಯಾಗಿತ್ತು ಎಂದು ಕೆರೆಯ ಇತಿಹಾಸ ತಿಳಿಸಿದರು.
ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಹುಯಿಲಗೋಳ ಗ್ರಾ.ಪಂ ಅಧ್ಯಕ್ಷ ಟಿಪ್ಪು ಸುಲ್ತಾನ್ ನದಾಫ್, ಪಿಡಿಒ ವಾಸುದೇವ್ ಪೂಜಾರ್, ಕ್ಷೇತ್ರ ಯೋಜನಾಧಿಕಾರಿ ಸುರೇಂದ್ರ ನಾಯಕ್, ಕೆರೆ ಅಭಿಯಂತರ ಸತೀಶ ಹಾಗೂ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು.
ಕೆರೆ ಸಮಿತಿ ಅಧ್ಯಕ್ಷ ತಿಪ್ಪಣ್ಣ ಗಂಗಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಕೆರೆ ಸಮಿತಿಯ ಸರ್ವ ಸದಸ್ಯರು, ಹುಯಿಲಗೋಳ ಗ್ರಾಮದ ನವಜೀವನ ಸಮಿತಿಯ ಸದಸ್ಯರು, ಸ್ವ-ಸಹಾಯ ಸಂಘ ಹಾಗೂ ಪ್ರಗತಿ ಬಂಧು-ಸಂಘಗಳ ಸದಸ್ಯರು, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳಿದ್ದರು. ಕೃಷಿ ಮೇಲ್ವಿಚಾರಕ ಕಿರಣ ಮಹೇಂದ್ರಕರ ಸ್ವಾಗತಿಸಿದರು. ವಲಯದ ಮೇಲ್ವಿಚಾರಕ ಮಲ್ಲಿಕಾರ್ಜುನ್ ಗೌಡ ನಿರೂಪಿಸಿದರು.
ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೋಶ್ರೀ ಹೇಮಾವತಿ ಅಮ್ಮನವರು ಕೆರೆ ಸಂರಕ್ಷಣೆ ಮೂಲಕ ರಾಜ್ಯದಲ್ಲಿ ಈಗಾಗಲೇ 803 ಕೆರೆಗಳ ಹೂಳೆತ್ತಿರುವುದು ಐತಿಹಾಸಿಕ ದಾಖಲೆ. ಇಂತಹ ಕಾರ್ಯಕ್ಕೆ ಜನ ಸಹಕರಿಸಲಿ.
-ಶ್ರೀ ಫಕ್ಕೀರೇಶ್ವರ ಪಟ್ಯಾಧ್ಯಕ್ಷರು.
ಓಂಕಾರೆಶ್ವರ ಹಿರೇಮಠ, ಮಲ್ಲಸಮುದ್ರ.
ಭೂಮಿಪೂಜೆ ನೆರವೇರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗದಗ ಜಿಲ್ಲಾ ನಿರ್ದೇಶಕ ಯೋಗೇಶ ಎ. ಮಾತನಾಡಿ, ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿಯೇ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಆರಂಭಿಸಿದ್ದಾರೆ. ಈ ಕೆರೆ ಅಭಿವೃದ್ಧಿ ಕಾರ್ಯಕ್ರಮ ಮಾತೋಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸು ಎಂದರು.