ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆದ್ರಳ್ಳಿ, ವಡ್ಡರಪಾಳಾ ಹಾಗೂ ನಾದಿಗಟ್ಟಿ ಗ್ರಾಮದ ಭೋವಿ ಸಮಾಜದ ಕೆಲವಷ್ಟು ಅಕ್ರಮ ದಂಧೆಕೋರರು, ಪುಂಡರು ಬಂಜಾರ ಸಮಾಜದ ಕುಮಾರ ಮಹಾರಾಜ ಸ್ವಾಮಿಗಳಿಗೆ ಗಡಿಪಾರಿಗೆ ಒತ್ತಾಯಿಸಿ ಬೆದರಿಕೆಯೊಡ್ಡುತ್ತಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮಂಗಳವಾರ ಸಂಜೆ ನೂರಾರು ಮಹಿಳೆಯರು ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಆಗಮಿಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಆದ್ರಳ್ಳಿ ಗ್ರಾಮದ ಮಹಿಳೆಯರು ಆದ್ರಳ್ಳಿ ಗವಿಮಠದಲ್ಲಿ ನೆಲೆ ನಿಂತಿರುವ ಕುಮಾರ ಮಹಾರಾಜ ಶ್ರೀಗಳು ಗ್ರಾಮದ ಜನರ ಹಿತ, ಕಲ್ಯಾಣಕ್ಕಾಗಿ ಮತ್ತು ಇಲ್ಲಿನ ಜನರಿಗೆ ನೈತಿಕ ಬಲವಾಗಿ, ಬದುಕಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರಹಳ್ಳಿ ಗ್ರಾಮದ ಸುತ್ತಮುತ್ತಲೂ ಅನೇಕ ವರ್ಷಗಳಿಂದ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿರುವ ಅಕ್ರಮ ಕಲ್ಲು, ಮರಳು ಗಣಿಗಾರಿಕೆಯಿಂದ ಇಲ್ಲಿನ ಜನರು ಅನುಭವಿಸುತ್ತಿರುವ ಕಷ್ಟ-ನಷ್ಟ-ಅನ್ಯಾಯಗಳಿಗೆ ದನಿಯಾಗಿ ಶ್ರೀಗಳು ನಿಂತಿದ್ದಾರೆ. ಕೆಲವೊಂದು ಭೋವಿ ಸಮಾಜದ ದಂಧೆಕೋರರು, ಪುಂಡರು ಕುಮಾರ ಮಹಾರಾಜರಿಗೆ ಮಠವನ್ನು ಬಿಟ್ಟು ತೊಲಗಿ ಎಂದು ಜೀವ ಬೆದರಿಕೆಯ ಎಚ್ಚರಿಕೆ ನೀಡುತ್ತಿದ್ದಾರೆ.
ಭೋವಿ, ಬಂಜಾರ, ಹರಿಜನ, ತಳವಾರ, ಲಿಂಗಾಯತ ಹೀಗೆ ಎಲ್ಲ ಸಮಾಜದವರು ಗ್ರಾಮದಲ್ಲಿ ಪರಸ್ಪರ ಅನ್ಯೋನ್ಯವಾಗಿದ್ದೇವೆ. ಸಮಾಜಗಳ ನಡುವೆ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅವರು ಕುಗ್ಗಿದ್ದಾರೆ. ಕಾರಣ ಇದರಿಂದ ತಮ್ಮ ಅಕ್ರಮ ದಂಧೆಗೆ ಅಡ್ಡಿಯಾಗಿರುವ ಶ್ರೀಗಳ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿ ಅವರನ್ನು ಇಲ್ಲಿಂದ ತೆರವುಗೊಳಿಸುವ ದುರುದ್ದೇಶದಿಂದ ಕೆಲ ಪಟ್ಟಭದ್ರ ಹಿಸಾಸಕ್ತಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ. ಶ್ರೀಗಳು ಮಠದಲ್ಲಿಯೇ ಇರಬೇಕು ಅದಕ್ಕಾಗಿ ಶ್ರೀಗಳ ಪರವಾದ ಹೋರಾಟಕ್ಕೆ ತಾವು ಸಿದ್ಧರಾಗಿದ್ದೇವೆ ಎಂದರು.
ಲಂಬಾಣಿ ಸಮಾಜದ ಗೀತಾ ನಾಯಕ, ಶಾರದಾ ಕಾರಬಾರಿ, ಸತ್ಯಮ್ಮ ತಳವಾರ, ಚಿಗವ್ವ ತಳವಾರ, ಕಮಲವ್ವ ಪಾಟೀಲ್, ಬಸಮ್ಮ ಪಾಟೀಲ್, ನೀಲವ್ವ ಅಂಬಿಗೇರ, ಬಸವೇಣವ್ವ ಪಾಟೀಲ್, ಶಾರವ್ವ ಹರಿಜನ, ಉಡಚವ್ವ, ಹರಿಜನ ರತ್ನವ್ವ ತಳವಾರ, ಮಂಜವ್ವ ರಾಹುತ್ ನಿರ್ಮಲ ರಾಹುತ್, ಶಾಂತವ್ವ ಲಮಾಣಿ, ಶಿವಕ್ಕ ತಳವಾರ, ಗಂಗವ್ವ ಲಮಾಣಿ, ಸುಸವ್ವ ಲಮಾಣಿ, ರೇಣವ್ವ ಲಮಾಣಿ, ಸೇರಿದಂತೆ ನೂರಾರು ಮಹಿಳೆಯರು ಇದ್ದರು.
ಪಿಎಸ್ಐ ನಾಗರಾಜ ಗಡಾದ ಹಾಗೂ ಅಪರಾಧ ವಿಭಾಗದ ಪಿಎಸ್ಐ ಟಿ.ಕೆ. ರಾಠೋಡ ಮನವಿ ಸ್ವೀಕರಿಸಿದರು.
ಈ ಹಿನ್ನೆಲೆಯಲ್ಲಿ ಆದ್ರಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಮಾ.7ರಂದು ಆದ್ರಳ್ಳಿ ಗ್ರಾಮದಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆ ಕೈಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ಪೊಲೀಸ್ ಇಲಾಖೆ ಶ್ರೀಗಳಿಗೆ ಮತ್ತು ಭಕ್ತರಿಗೆಲ್ಲ ಸೂಕ್ತವಾದ ಕಾನೂನು ರಕ್ಷಣೆ ಕೊಡಬೇಕು ಎಂದು ಗ್ರಾಮಸ್ಥರು ವಿನಂತಿಸಿದರು.