ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶಿಗ್ಲಿ ಗ್ರಾಮದ ಹಳೆ ಬಸ್ ನಿಲ್ದಾಣದಲ್ಲಿ ಸಂಚರಿಸುವ ಎಲ್ಲ ಬಸ್ಸುಗಳನ್ನು ನಿಲುಗಡೆ ಮಾಡಬೇಕು ಎಂದು ಗ್ರಾ.ಪಂ ಸದಸ್ಯರು ಹಾಗೂ ವ್ಯಾಪಾರಸ್ಥರು ಅಗ್ರಹಿಸಿದರು.
ಗ್ರಾ.ಪಂ ಸದಸ್ಯ ಸಂತೋಷ ತಾಂದಳೆ ಮಾತನಾಡಿ, ಅನೇಕ ವರ್ಷಗಳಿಂದಲೂ ಎಲ್ಲರಿಗೂ ಅನಕೂಲವಾಗುವ ಹಳೇ ಬಸ್ ನಿಲ್ದಾಣದಲ್ಲಿಯೇ ಬಸ್ಸುಗಳನ್ನು ನಿಲುಗಡೆ ಮಾಡುತ್ತಾ ಬರಲಾಗಿದೆ. ಗ್ರಾಮದ ಕೇಂದ್ರ ಸ್ಥಳವಾಗಿದ್ದರಿಂದ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ರೋಗಿಗಳು, ಹಿರಿಯ ನಾಗರಿಕರು, ವೃದ್ಧರು, ಮಹಿಳೆಯರು ಸೇರಿ ಎಲ್ಲ ವರ್ಗದ ಜನರಿಗೂ ಅನಕೂಲವಾಗಿದೆ. ಆದರೆ ಏಕಾಏಕಿ ಕೆಲ ದಿನಗಳಿಂದ ಹಳೇ ಬಸ್ ನಿಲ್ದಾಣವಿದ್ದ ಸ್ಥಳದಲ್ಲಿ ಬಸ್ ನಿಲುಗಡೆ ಸಂಪೂರ್ಣ ಬಂದ್ ಮಾಡಿದ್ದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ.
ಹೊಸ ಬಸ್ ನಿಲ್ದಾಣದೊಳಗೆ ಎಲ್ಲ ಬಸ್ಸುಗಳು ಹೋಗಿ-ಬರಲು ಯಾರದ್ದೂ ತಕರಾರಿಲ್ಲ. ಮೊದಲಿನಂತೆ ಹಳೇ ಬಸ್ ನಿಲ್ದಾಣದಲ್ಲಿ ಜನರ ಕೋರಿಕೆಯಂತೆ ನಿಲುಗಡೆ ಮಾಡಲೇಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಈ ಬಗ್ಗೆ ಅಧಿಕಾರಿಗಳು ಜನರ ಮನವಿಗೆ ಸ್ಪಂದಿಸಬೇಕು ಎಂದರು.
ಈ ವೇಳೆ ಬಸವರಾಜ ಕೂಸನೂರ, ಸಿದ್ದರಾಮಸ್ವಾಮಿ ಪೂಜಾರ, ಶಶಿಧರ ಮುಳುಗುಂದಮಠ, ಮಂಜುನಾಥ ಕಡೆಮನಿ, ವಿನಾಯಕ ಹೆಬ್ಬಳ್ಳಿ, ಆನಂದ ಮಾಳಗಿ, ಸಂತೋಷ ಜನಿವಾರದ, ಯಲ್ಲಪ್ಪ ಲಕ್ಷ್ಮೇಶ್ವರ, ಬಸವರಾಜ ಗುಂಡಮಿ, ಲಕ್ಷ್ಮಣ ಕುರಿ, ಶಿವಪುತ್ರಪ್ಪ ಅಳ್ಳಳ್ಳಿ ಸೇರಿ ಅನೇಕರಿದ್ದರು.