ಗದಗ;- ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಚಾಲಕನ ನಿರ್ಲಕ್ಷ್ಯದಿಂದ ಬೈಕ್ ಗೆ ಡಿಕ್ಕಿ ಹೊಡೆದು 5 ಕುರಿಗಳು ಸೇರಿದಂತೆ ಓರ್ವ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹದ್ಲಿ ಕ್ರಾಸ್ ಬಳಿ ಜರುಗಿದೆ.
ಟಿಪ್ಪರ್ ಚಾಲಕನ ಅಜಾಗರೂಕತೆಯೇ ಈ ಘಟನೆಗೆ ಕಾರಣವೆನ್ನಲಾಗಿದ್ದು, ಮೊದಲಿಗೆ ಕುರಿಗಳ ಹಿಂಡಿನ ಮೇಲೆ ಟಿಪ್ಪರ್ ಚಲಾಯಿಸಿ ಬಳಿಕ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬೈಕ್ನಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೋರ್ವನಿಗೆ ಗಂಭೀರ ಗಾಯವಾಗಿದೆ. ಅಷ್ಟೇ ಅಲ್ಲದೇ ಘಟನೆಯಿಂದ ಐದಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿದೆ.
ನರಗುಂದ-ರೋಣ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಯಾವಗಲ್ ಗ್ರಾಮದ ನಿವಾಸಿ ಇಮಾಮ್ ಸಾಬ್(40) ಮೃತ ವ್ಯಕ್ತಿ. ಗಂಭೀರ ಗಾಯಗೊಂಡ ಬೈಕ್ ಸವಾರನನ್ನು ಯಲ್ಲಪ್ಪ ಎಂದು ಗುರುತಿಸಲಾಗಿದ್ದು, ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಯಾವಗಲ್ ಗ್ರಾಮದಿಂದ ನವಲಗುಂದದ ಕಾಮರತಿಯನ್ನು ನೋಡಲು ಬೈಕ್ ಸವಾರರು ಹೊರಟಿದ್ದರು ಎನ್ನಲಾಗಿದೆ. ಇದೇ ವೇಳೆ ನರಗುಂದ ಕಡೆಯಿಂದ ಯಾವಗಲ್ ಕಡೆಗೆ ಮಣ್ಣು ತುಂಬಿದ್ದ ಟಿಪ್ಪರ್ ಹೊರಟಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಚಿಕ್ಕೋಡಿ ಭಾಗದ ಸಿದ್ದಪ್ಪ ಎಂಬ ವ್ಯಕ್ತಿಗೆ ಸೇರಿದ್ದ ಐದು ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು,10 ಕ್ಕೂ ಹೆಚ್ಚು ಕುರಿಗಳಿಗೆ ಗಾಯವಾಗಿದೆ. ಅಪಘಾತದ ರಭಸಕ್ಕೆ ಬೈಕ್ ನಜ್ಜು-ಗುಜ್ಜಾಗಿದ್ದು, ಕುರಿಗಳ ದೇಹ ಛಿದ್ರ-ಛಿದ್ರಗೊಂಡಿವೆ.
ಸುದ್ದಿ ತಿಳಿದು ಸ್ಥಳಕ್ಕೆ CPI ಮಂಜುನಾಥ್ ನಡುವಿನಮನಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಪಘಾತ ಮಾಡಿದ ಟಿಪ್ಪರ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.