ವಿಕ ಸುದ್ದಿಲೋಕ ಗದಗ: ಕೇಂದ್ರ ಸರಕಾರ ತನ್ನ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಶೇ. 50ರಷ್ಟು ಹುದ್ದೆಗಳನ್ನು ಭರ್ತಿ ಮಾಡದೇ, ಇಂದಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಂತೆ ಅನ್ಯಾಯ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಭಾನುವಾರ ನಗರದ ಕಾಟನ್ ಸೇಲ್ ಸೊಸೈಟಿ ಆವರಣದಲ್ಲಿ ಕೆ.ಎಚ್. ಪಾಟೀಲರ ಜನ್ಮಶತಮಾನೋತ್ಸವ ಹಾಗೂ ಕಾಟನ್ ಸೇಲ್ ಸೊಸೈಟಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ದೇಶದಾದ್ಯಂತ ನವೋದಯ ಶಾಲೆಗಳಲ್ಲಿ 40 ಸಾವಿರ, ಕೇಂದ್ರೀಯ ವಿದ್ಯಾಲಯದಲ್ಲಿ 7400 ಹುದ್ದೆಗಳು, ಹೈದ್ರಾಬಾದ್ ಕರ್ನಾಟಕದಲ್ಲಿ 37 ಸಾವಿರ, ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ 5400 ಹುದ್ದೆ ಭರ್ತಿಯಾಗಿಲ್ಲ. ದೇಶಾದ್ಯಂತ ಕೇಂದ್ರ ಸರಕಾರದ ಅಧೀನದ 90 ಸಾವಿರ ಸರಕಾರಿ ಶಾಲೆಗಳು ಬಾಗಿಲು ಮುಚ್ಚಿವೆ. ಅದರಲ್ಲಿ 50 ಸಾವಿರ ಶಾಲೆಗಳು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಕ್ಕೆ ಸೇರಿವೆ. ಇದೇ ಅವಧಿಯಲ್ಲಿ ಶೇ. 40ರಷ್ಟು ಖಾಸಗಿ ಶಾಲೆಗಳು ಆರಂಭವಾಗಿವೆ. ಹೀಗಾದರೆ ಬಡವರ ಮಕ್ಕಳು ಎಲ್ಲಿ ಶಿಕ್ಷಣ ಪಡೆಯಬೇಕು ಎಂದು ಪ್ರಶ್ನಿಸಿದರು.
ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳ ಲೋಕಸಭೆ ಸದಸ್ಯರ ಸಂಖ್ಯೆ ಕಡಿಮೆ ಮಾಡಿ, ಉತ್ತರ ಭಾರತದಲ್ಲಿ ಶೇ. 30ರಷ್ಟು ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಷಡ್ಯಂತ್ರ ನಡೆದಿದೆ. ರಾಜ್ಯದ ವಿಷಯಕ್ಕೆ ಬಂದಾಗ ಒಡಕಿನ ಮಾತು ಬಿಟ್ಟು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದ ಅವರು, ದುಡ್ಡು ಮತ್ತು ಅಧಿಕಾರ ಒಂದಾದರೆ ಬಡವರ ಉದ್ಧಾರವಾಗದು ಎಂಬ ದೇವರಾಜು ಅರಸು ಅವರ ಮಾತು ನೆನಪಿಟ್ಟುಕೊಂಡು ಇಂದಿನ ರಾಜಕಾರಣಿಗಳು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಭಾಪತಿ ಬಸವರಾಜ ಹೊರಟ್ಟಿ, ಅರಣ್ಯ ಸಚಿವ ಈಶ್ವರ ಖಂಡ್ರೆ, ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಮಾಜಿ ಶಾಸಕ ಡಿ.ಆರ್. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಕೇಂದ್ರೀಯ ವಿಶ್ವವಿದ್ಯಾಲಯದ 13 ಸಾವಿರ ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗಿದ್ದಾರೆ. ಬಡ ಮಕ್ಕಳಿಗೆ ವಿದ್ಯಾರ್ಥಿ ವೇತನ ಮತ್ತೆ ಆರಂಭವಾಗಬೇಕು. ಸರಕಾರ ವಿದ್ಯಾರ್ಥಿವೇತನ ನೀಡದಿದ್ದರೆ ಜನಸಮುದಾಯ ಆ ಕೆಲಸ ಮಾಡಬೇಕು. ಕೆ.ಎಚ್. ಪಾಟೀಲರ ಹೆಸರಿನಲ್ಲಿ ಪ್ರತಿವರ್ಷ ರಾಜ್ಯದ 100 ವಿದ್ಯಾರ್ಥಿಗಳಿಗೆ ಶಿಷ್ಯವೇತನ ಕೊಡುವ ಕೆಲಸ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು.