ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಇಲ್ಲಿಯ ಎಸ್ಸಿ/ಎಸ್ಟಿ ಸಮುದಾಯದ ಪದವಿ ಹಂತದ ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಗಾಗಿ ನಿರ್ಮಿಸಲಾದ ಕಟ್ಟಡವು ನಿರ್ಮಾಣವಾಗಿ 8-9 ವರ್ಷಗಳು ಕಳೆಯುತ್ತಾ ಬಂದರೂ ಸಹ ಉಪಯೋಗಕ್ಕೆ ಬಾರದೇ, ಅನೈತಿಕ ಚಟುವಟಿಕೆಗಳಿಗಷ್ಟೇ ಬಳಕೆಯಾಗುತ್ತಿದ್ದು, ಲಕ್ಷಾಂತರ ರೂ ವ್ಯಯಿಸಿ ವಸತಿ ನಿಲಯ ನಿರ್ಮಿಸಿದ್ದು ಯಾವ ಪುರುಷಾರ್ಥಕ್ಕಾಗಿ ಎಂದು ಪ್ರಶ್ನಿಸುವಂತಾಗಿದೆ.
ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ 2013-14, 2014-15ನೇ ಸಾಲಿನ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಶಿರಹಟ್ಟಿ ಪ್ರಥಮದರ್ಜೆ ಕಾಲೇಜಿನ ಹಿಂಬದಿಯಲ್ಲಿ 99.42 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯಾರ್ಥಿನಿಯರ ವಸತಿ ನಿಲಯವು 2017ರಲ್ಲಿಯೇ ಮುಗಿದಿದ್ದು, ವಸತಿ ನಿಲಯಕ್ಕೆ ಅವಶ್ಯವಿರುವ ಮೂಲ ಸೌಲಭ್ಯಗಳು ಇಲ್ಲದ ಕಾರಣ ಈ ವಸತಿ ಶಾಲೆಯ ಕಟ್ಟಡವು ಇಲ್ಲಿಯವರೆಗೂ ಕಾರ್ಯಾರಂಭವಾಗಿಲ್ಲ. ಇತ್ತೀಚೆಗೆ ವಸತಿ ನಿಲಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವಸತಿ ನಿಲಯವನ್ನು ಹಸ್ತಾಂತರಿಸಿದ್ದು, ಇನ್ನು ಕೆಲವು ಮೂಲಸೌಲಭ್ಯಗಳು ಆದ ನಂತರ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವುದಾಗಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಶಿರಹಟ್ಟಿ ತಾಲೂಕಿನಲ್ಲಿ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ಪದವಿ ಹಂತದ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಲು ವಸತಿ ನಿಲಯವನ್ನು ಮಂಜೂರು ಮಾಡಿ ಅದಕ್ಕೆ ಅನುದಾನವನ್ನು ಸಹ ಬಿಡುಗಡೆಗೊಳಿಸಿತ್ತು. ಅದರಂತೆ ಕಟ್ಟಡ ನಿರ್ಮಾಣವಾಯಿತಾದರೂ ವಸತಿ ಶಾಲೆಗೆ ಮೂಲಸೌಲಭ್ಯ ಇಲ್ಲವೆಂದು ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ವಸತಿ ಶಾಲೆಯನ್ನು ಪ್ರಾರಂಭಿಸುವ ಗೋಜಿಗೆ ಹೋದಂತೆ ಕಾಣುತ್ತಿಲ್ಲ. ಒಂದು ವಸತಿ ಶಾಲೆಗೆ ಅವಶ್ಯಕವಿರುವ ಮೂಲಸೌಲಭ್ಯವನ್ನು ಕಲ್ಪಿಸದೇ ಬರೀ ವಸತಿ ನಿಲಯದ ಕಟ್ಟಡ ನಿರ್ಮಿಸಿದರೆ ಸರಕಾರದ ಅನುದಾನ ಸದ್ಬಳಕೆಯಾಗಲು ಸಾಧ್ಯವೇ, ವಸತಿ ಶಾಲೆ ಕೇವಲ ಅಂಕಿ-ಅಂಶಕ್ಕೆ ಸೀಮಿತವಾದರೆ ಸಾಕೇ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿರುವದಕ್ಕೆ ಯಾರು ಹೊಣೆ ಎಂಬೆಲ್ಲ ಉತ್ತರವಿಲ್ಲದ ಪ್ರಶ್ನೆಗಳು ಮೂಡುವಂತಾಗಿದೆ.
ವಸತಿ ಶಾಲೆಯು ವಿಶಾಲವಾದ ಜಾಗೆಯಲ್ಲಿ ನಿರ್ಮಾಣವಾಗಿದ್ದು, ಉಪಯೋಗಕ್ಕೆ ಬಾರದೇ ಇರುವುದರಿಂದ ಕಟ್ಟಡವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಸಮರ್ಪಕ ನಿರ್ವಹಣೆ ಇಲ್ಲದ್ದರಿಂದ ಕಿಟಕಿ ಗಾಜುಗಳು ಒಡೆದಿದ್ದು, ಸುತ್ತಲ್ಲೂ ಎಲ್ಲೆಂದರಲ್ಲಿ ಮದ್ಯದ ಪೌಚ್ಗಳು, ಬಾಟಲಿಗಳು, ಗಿಡ-ಗಂಟಿಗಳು ರಾರಾಜಿಸುತ್ತಿವೆ.
ಈ ಕುರಿತು ಪ್ರತಿಕ್ರಿಯಿಸಿದ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮರಿಗೌಡ ಸುರಕೋಡ, 6 ತಿಂಗಳ ಹಿಂದೆ ವಸತಿ ನಿಲಯವನ್ನು ಇಲಾಖೆಯ ಸುಪರ್ದಿಗೆ ತೆಗೆದುಕೊಂಡಿದ್ದು, ವಿದ್ಯುತ್, ನೀರು, ಕಂಪೌAಡ್ ಸೇರಿದಂತೆ ಅಗತ್ಯ ಮೂಲಸೌಲಭ್ಯ ಒದಗಿಸಿ ವಸತಿ ನಿಲಯವನ್ನು ಪ್ರಾರಂಬಿಸಲಾಗುವುದು ಎಂದಿದ್ದಾರೆ.
ತಾಲೂಕಿನ ಎಸ್ಸಿ/ಎಸ್ಟಿ ವಿದ್ಯಾರ್ಥಿನಿಯರ ಪದವಿ ಹಂತದ ಶಿಕ್ಷಣಕ್ಕೆ ಪೂರಕವಾಗಬೇಕಿದ್ದ ವಸತಿ ನಿಲಯ ಕಾರ್ಯಾರಂಭವಾಗದೇ ಇರುವುದು ಮಾರಕವಾಗಿದೆ. ಇದರಿಂದ ಅನೇಕರು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಇಲ್ಲಿ ಸದ್ಬಳಕೆಯಾದಂತೆ ಕಾಣುತ್ತಿಲ್ಲ. ಶೀಘ್ರವೇ ವಸತಿ ನಿಲಯ ಪ್ರಾರಂಭಕ್ಕೆ ಕ್ರಮ ಕೈಕೊಳ್ಳಬೇಕು.
– ವಿಶ್ವನಾಥ ಕಪ್ಪತ್ತನವರ.
ಜಿ.ಪಂ ಮಾಜಿ ಅಧ್ಯಕ್ಷ.
ಈ ಕುರಿತು ಪ್ರತಿಕ್ರಿಯಿಸಿದ ಕರ್ನಾಟಕ ಪ್ರಜಾಪರ ವೇದಿಕೆಯ ತಾಲೂಕಾಧ್ಯಕ್ಷ ಹಸನ ತಹಸೀಲ್ದಾರ, ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ಶೀಘ್ರವೇ ವಸತಿ ಶಾಲೆ ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ ಸಂಬAಧಿಸಿದ ಇಲಾಖೆಯ ಎದುರು ವೇದಿಕೆ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದರು.