ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಸಮಾಜದ ಕಣ್ಣಾಗಿರುವ ಮಹಿಳೆ ಶಿಕ್ಷಣವಂತಳಾದಾಗ ಮಾತ್ರ ಸುಶಿಕ್ಷಿತ, ಆರೋಗ್ಯಕರ ಸಮಾಜ ನಿರ್ಮಾಣವಾಗಲು ಸಾಧ್ಯ. ಆದ್ದರಿಂದ ಮಹಿಳೆಯರು ತಮ್ಮ ಹಕ್ಕು, ಸ್ವಾತಂತ್ರ್ಯ, ಸಮಾನತೆ ಪಡೆಯಲು ಶಿಕ್ಷಣವಂತರಾಗಬೇಕು ಎಂದು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಉಪಾಧ್ಯಕ್ಷೆ ಜಯಲಕ್ಷ್ಮೀ ಮಹಾಂತಶೆಟ್ಟರ ಹೇಳಿದರು.
ಅವರು ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಸಭಾಭವನದಲ್ಲಿ ಇನ್ನರ್ವ್ಹಿಲ್ ಕ್ಲಬ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸ ನೀಡಿ ಮಾತನಾಡಿದ ಹಿರಿಯ ಸಾಹಿತಿ ಡಾ. ಜಯಶ್ರೀ ಕೋಲಕಾರ, ಮಾನವೀಯತೆಯ ಸಾಕಾರ ಮೂರ್ತಿಯಾದ ಮಹಿಳೆ ಶಿಕ್ಷಣ, ಸಂಸ್ಕೃತಿ, ಸಂಸ್ಕಾರ, ಧರ್ಮದ ಪ್ರತಿರೂಪವೇ ಆಗಿದ್ದಾಳೆ. ಪ್ರಸ್ತುತ ದಿನಮಾನಗಳಲ್ಲಿ ಸ್ತ್ರೀ ಸಮಾನತೆ, ಸರಕಾರದ ಸೌಲಭ್ಯ, ಸಂವಿಧಾನಾತ್ಮಕ ಹಕ್ಕುಗಳನ್ನು ಪಡೆದುಕೊಂಡು ಸಮಾಜಮುಖಿ ಕಾರ್ಯಗಳೊಂದಿಗೆ ಮುನ್ನಡೆಯಬೇಕು. ಹೆಣ್ಣುಮಕ್ಕಳು ಹೆಚ್ಚು ಸಾಕ್ಷರರಾಗುವ ಮೂಲಕ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸ್ವಾವಲಂಬಿಯಾಗಿ ಬಾಳುವ ಧೈರ್ಯ ಬೆಳೆಸಿಕೊಳ್ಳಬೇಕು. ರಾಮಾಯಣ, ಮಹಾಭಾರತ, ವೇದ-ಪುರಾಣ ಕಾಲದಿಂದಲೂ ಮಹಿಳೆಯರಿಗೆ ಪೂಜ್ಯನೀಯ ಸ್ಥಾನಮಾನವಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ರೇಖಾ ವಡಕಣ್ಣವರ ವಹಿಸಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಅನ್ನಪೂರ್ಣ ಓದುನವರ, ಅಶ್ವಿನಿ ಅಂಕಲಕೋಟಿ, ಸುಲೋಚನಾ ಜವಾಯಿ, ಕಾವ್ಯಾ ದೇಸಾಯಿ, ಮಂಜುಳಾ ಸತ್ಯಪ್ಪನವರ, ಮಂಜುಳಾ ಓದುನವರ, ಜಯಶ್ರೀ ಮೆಳ್ಳಿಗೇರಿ, ನಿರ್ಮಲಾ ಅರಳಿ, ನಂದಾ ಧರ್ಮಾಯತ, ಶೈಲಾ ಆದಿ, ಗಿರಿಜಾ ಮುದಗಲ್, ಸಂಗೀತಾ ಧರ್ಮಾಯತ, ಕಲಾವತಿ ಆವಟೆ, ಶಕುಂತಲಾ ವಡಕಣ್ಣವರ, ನಿರ್ಮಲಾ ವಡಕಣ್ಣವರ, ಜ್ಯೋತಿ ರಾಜೋಳಿ, ದ್ರಾಕ್ಷಾಯಣಿ ಸಾಲಿಮಠ ಹಲವರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇಂದುಮತಿ ಜಕ್ಕನಗೌಡ್ರ, ಚಿನ್ನದ ಪದಕ ವಿಜೇತೆ ಸಂಗೀತಾ ಲಕ್ಕಪ್ಪನವರ, ಡಿ.ಎಂ. ಪೂಜಾರ ಇವರುಗಳನ್ನು ಸನ್ಮಾನಿಸಲಾಯಿತು. ಮೈತ್ರಾದೇವಿ ಹಿರೇಮಠ, ಪಾರ್ವತಿ ಕಳ್ಳಿಮಠ ನಿರೂಪಿಸಿದರು.
ಸಂಸ್ಥೆಯ ಸಂಸ್ಥಾಪಕಿ ಮಾಲದೇವಿ ದಂದರಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 15 ವರ್ಷಗಳಿಂದ ಅವಿರತವಾಗಿ ಕಾರ್ಯನಿರ್ವಹಿಸುತ್ತಿರುವ ಇನ್ನರ್ವ್ಹಿಲ್ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಸರು ಮಾಡಿದೆ. ಇಲ್ಲಿಯವರೆಗೂ ಸಂಸ್ಥೆಯ ಅಧ್ಯಕ್ಷರಾಗಿ, ಸದಸ್ಯರಾಗಿ ಕೆಲಸ ನಿರ್ವಹಿಸಿದ ಪ್ರತಿಯೊಬ್ಬರೂ ಸಂಸ್ಥೆಯ ಬೆಳವಣಿಗೆಯಲ್ಲಿ ನೀಡಿದ ಪಾತ್ರ ಮಹತ್ವದ್ದಾಗಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.