ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮಹಾಮಾರಿ ಅಟ್ಟಹಾಸ ಕಟ್ಟಿಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿ ಇಂದಿನಿಂದ 14 ದಿನಗಳ ಲಾಕ್ ಡೌನ್ ಶುರುವಾಗಿದೆ. ಬೆಳಿಗ್ಗೆಯಿಂದಲೇ ಪೊಲೀಸರು ಜನರಿಗೆ ಬುದ್ಧಿ ಹೇಳುವ ಪಾಠ ಶುರು ಮಾಡಿದ್ದಾರೆ.
ಬಳ್ಳಾರಿ, ಕೋಲಾರ ಮತ್ತು ಕಲಬುರಗಿಯಲ್ಲಿ ಬೈಕ್ ಮೇಲೆ ಬಂದವರಿಗೆ ಲಾಠಿ ರುಚಿ ತೋರಿಸಿ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೇ. 24ರವರೆಗ ರಾಜ್ಯದಲ್ಲಿ ಈ ಲಾಕ್ ಡೌನ್ ಮುಂದುವರೆಯಲಿದೆ. ಅಗತ್ಯ ಸೇವೆ ಬಿಟ್ಟು ಉಳಿದೆಲ್ಲವೂ ಬಂದ್ ಆಗಿರಲಿದೆ. ಬೆಳಿಗ್ಗೆ 10 ಗಂಟೆಯ ನಂತರ ಮನೆಯಿಂದ ಹೊರ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ಬೆಳಿಗ್ಗೆಯಿಂದ ಬೈಕ್ ಮೇಲೆ ಸಂಚರಿಸುತ್ತಿರುವವರ ಬೈಕ್ ಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.
ಅಗತ್ಯ ವಸ್ತುಗಳ ಖರೀದಿಗೆ 4 ಗಂಟೆ ಮಾತ್ರ ಸಮಯ ಇರಲಿದೆ. ಬೆಳಿಗ್ಗೆ 6 ರಿಂದ 10ರ ವರೆಗೆ ಹೋದರೆ ಮಾತ್ರ ಅಗತ್ಯ ವಸ್ತುಗಳು ಸಿಗಲಿವೆ. ಮಾಂಸ ಖರೀದಿಗೂ ಬೆಳಿಗ್ಗೆ 10ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತಳ್ಳುಗಾಡಿಯಲ್ಲಿ ತರಕಾರಿ ಮಾರುವವರು ಸಂಜೆಯವರೆಗೂ ಮಾರಬಹುದು.
ಇಂದಿನಿಂದ 14 ದಿನಗಳ ಕಾಲ ಅಂತರ್ ಜಿಲ್ಲಾ ಓಡಾಟಕ್ಕೆ ನಿಷೇಧವಿದೆ. ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಸಾರಿಗೆ ಸಂಸ್ಥೆ, ಬಿಎಂಟಿಸಿ, ಮೆಟ್ರೋ, ಆಟೋ, ಟ್ಯಾಕ್ಸಿ ಸೇವೆಯಿರುವುದಿಲ್ಲ. ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ, ಮಾರುಕಟ್ಟೆಗಳು ಬಂದ್ ಇರಲಿವೆ.
ಆಸ್ಪತ್ರೆ, ಮೆಡಿಕಲ್, ನ್ಯಾಯಬೆಲೆ ಅಂಗಡಿ, ಹಾಲು (ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ), ಹಣ್ಣು – ತರಕಾರಿ ಬೆಳಿಗ್ಗೆ 10ರ ವರೆಗೆ ಮಾತ್ರ ತೆರೆದಿರುತ್ತದೆ.
ತಳ್ಳುಗಾಡಿಯಲ್ಲಿ ಹಣ್ಣು-ತರಕಾರಿ (ಸಂಜೆ 6 ಗಂಟೆಯವರೆಗೆ), ಮಾಂಸ ಹಾಗೂ ದಿನಸಿ ಅಂಗಡಿ ಬೆಳಿಗ್ಗೆ 10ರ ವರೆಗೆ ತೆರೆಯಲಿದೆ. ಇಡೀ ದಿನ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶವಿದೆ. ಮದ್ಯ ಪಾರ್ಸೆಲ್ ಗೆ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶ.
ಹಾಪ್ ಕಾಮ್ಸ್ ಸಂಜೆಯವರೆಗೆ ತೆರೆದಿರುತ್ತದೆ. ಮದುವೆಗಳನ್ನು ಮನೆಯಲ್ಲಿ ಮಾಡಿಕೊಳ್ಳಬೇಕು. ಆದರೆ, 40 ಜನರಿಗೆ ಮಾತ್ರ ಅವಕಾಶ. ಅಂತ್ಯ ಸಂಸ್ಕಾರಕ್ಕೆ 5 ಜನರಿಗಷ್ಟೇ ಅವಕಾಶ. ಹೋಂ ಡೆಲಿವರಿ ಇರಲಿದೆ. ರೈಲು ಹಾಗೂ ವಿಮಾನಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಅನಗತ್ಯವಾಗಿ ಹೊರ ಬಂದರೆ, ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಾರೆ. ಲಾಠಿ ಬೀಸುತ್ತಾರೆ. ಕೇಸ್ ದಾಖಲಿಸುತ್ತಾರೆ.