ವಿಜಯಸಾಕ್ಷಿ ಸುದ್ದಿ, ಗದಗ: ವಿದ್ಯಾರ್ಥಿಗಳು ರಜಾ ದಿನಗಳನ್ನು ವ್ಯರ್ಥ ಮಾಡದೆ ಶೈಕ್ಷಣಿಕ ವರ್ಷದ ಮುಂದಿನ ವರ್ಗದ ಅಭ್ಯಾಸವನ್ನು ಈಗಿನಿಂದಲೇ ಆರಂಭಿಸುವ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು. ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕೆಂದು ಪೊಲೀಸ್ ಇಲಾಖೆಯ ಆರ್ಪಿಐ ಶಂಕರಗೌಡ ಚೌದ್ರಿ ಹೇಳಿದರು.
ಅವರು ಮಂಗಳವಾರ ನಗರದ ಶಿಕ್ಷಣ ಪ್ರೇಮಿ, ತ್ಯಾಗಜೀವಿ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಬೇಸಿಗೆ ರಜೆಯಲ್ಲಿ ಆರಂಭಗೊAಡ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಶನ್ ಹಾಗೂ ಗ್ರಾಮೀಣ ಪ್ರದೇಶದ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದೊಂದಿಗೆ ಉಚಿತ ಊಟ-ವಸತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಣ ರಂಗಕ್ಕೆ ನೀಡಿದ ಕೊಡುಗೆ ಅನುಪಮವಾದದ್ದು. ಅವರಲ್ಲಿ ಟ್ಯೂಶನ್ ಪಡೆದವರು ಇಂದು ಉನ್ನತ ಹುದ್ದೆಯಲ್ಲಿದ್ದಾರೆ. ಅವರ ತರುವಾಯ ಆಶ್ರಮವನ್ನು ಶಿಷ್ಯ ಬಳಗ ಮುನ್ನಡೆಸಿದ್ದಾರೆ. ಇಲ್ಲಿ ಉಚಿತ ಟ್ಯೂಶನ್ ಜೊತೆಗೆ ಆಯ್ದ ವಿದ್ಯಾರ್ಥಿಗಳಿಗೆ ಉಚಿತ ಊಟ-ವಸತಿಯನ್ನು ನೀಡುತ್ತಿರುವದು ಮಾದರಿಯಾಗಿದೆ ಎಂದರು.
ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರ ಪಾಟೀಲ ಮಾತನಾಡಿ, ಗದಗ ಪರಿಸರದಲ್ಲಿ ಬಿ.ಜಿ. ಅಣ್ಣಿಗೇರಿ ಗುರುಗಳ ಆಶ್ರಮವು ಶಿಕ್ಷಣ ರಂಗಕ್ಕೆ ಬಹು ದೊಡ್ಡ ಕೊಡುಗೆ ನೀಡಿದೆ. ಗುರುಗಳ ತರುವಾಯ ಅವರ ಧ್ಯೇಯೋದ್ದೇಶಗಳನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರುವುದರ ಜೊತೆಗೆ ಒಂದಿಷ್ಟು ಸುಧಾರಣೆ ಮಾಡಿಕೊಂಡು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಆಶ್ರಮದಲ್ಲಿ ಟ್ಯೂಶನ್ ಪಡೆದವರಿಗೆ ವಿಶೇಷ ಪುರಸ್ಕಾರಗಳನ್ನು ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್ನ ಉಪಾಧ್ಯಕ್ಷ ಎಸ್.ಜಿ. ಅಣ್ಣಿಗೇರಿ ಸಂದರ್ಭೋಚಿತವಾಗಿ ಮಾತನಾಡಿದರು. ಸಮಾರಂಭದಲ್ಲಿ ನಿರ್ದೇಶಕರಾದ ಡಾ. ಬೆಳ್ಳರಿಮಠ, ಡಾ. ಚನ್ನಪ್ಪಗೌಡರ, ಶಿವಣ್ಣ ಕತ್ತಿ, ಸಿದ್ದಣ್ಣ ಕವಲೂರ, ತೋಂಟೇಶ, ಎಸ್.ಆರ್. ಪಾಟೀಲ, ಶಿಕ್ಷಕಿ ಮಂಜುಳಾ, ಜ್ಯೋತಿ, ಹುಲಿಗೆಮ್ಮ, ಸಂತೋಷ, ಗುರುರಾಜ, ಯೋಗ ಶಿಕ್ಷಕ ಮೋಹನ ಮುಂತಾದವರು ಪಾಲ್ಗೊಂಡಿದ್ದರು. ಪಾವನಿ ಪ್ರಾರ್ಥಿಸಿದರು. ಶಿಕ್ಷಕಿ ಮಂಜುಳಾ ನಿರೂಪಿಸಿದರು, ಶಿವಣ್ಣ ಕತ್ತಿ ವಂದಿಸಿದರು.