ವಿಜಯಸಾಕ್ಷಿ ಸುದ್ದಿ, ರೋಣ: ಬರಿ ಸರ್ವರ್ ಸಮಸ್ಯೆಯನ್ನೇ ಕಾರಣವಾಗಿ ಹೇಳುವ ಬದಲು ಕೆಲಸ ಮಾಡುವ ಪದ್ಧತಿಯನ್ನು ರೂಢಿಸಿಕೊಳ್ಳಿ. ಸರ್ವರ್ ಇಲ್ಲದ ಸಂದರ್ಭದಲ್ಲಿ ಬೇರೆ ಕೆಲಸಗಳನ್ನು ನಿರ್ವಹಿಸಿದರೆ ನಿಮಗೆ ಒಳ್ಳೆಯದು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಹಸೀಲ್ದಾರ ಕಚೇರಿಯ ಸಿಬ್ಬಂದಿಗಳಿಗೆ ಸೂಚಿಸಿದರು.
ಅವರು ಗುರುವಾರ ತಹಸೀಲ್ದಾರ ಕಚೇರಿಗೆ ಭೇಟಿ ನೀಡಿ, ವಿವಿಧ ಕೊಠಡಿಗಳಿಗೆ ತೆರಳಿ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮಾತನಾಡಿದರು.
ಎಲ್ಲದಕ್ಕೂ ಸರ್ವರ್ ಇಲ್ಲ ಎಂಬ ಉತ್ತರ ಹೇಳುವುದು ಉದ್ಯೋಗಿಯ ಲಕ್ಷಣವಲ್ಲ. ಬದಲಾಗಿ ಇಲಾಖೆಯ ಇನ್ನಿತರ ಅನೇಕ ಕೆಲಸಗಳಿರುತ್ತವೆ. ಸರ್ವರ್ ಬರುವವರೆಗೆ ಆ ಕೆಲಸಗಳನ್ನು ನಿರ್ವಹಿಸಬೇಕು. ಇದರಿಂದ ನಿಮ್ಮ ಮುಂದಿನ ಸಾಧನೆಗೆ ಅನುಕೂಲವಾಗುತ್ತದೆ. ಅದನ್ನು ಬಿಟ್ಟು ಕೇವಲ ನೆಪಗಳನ್ನು ಹೇಳಿದರೆ ನಿಮ್ಮ ತಹಸೀಲ್ದಾರರಿಗೆ ತೊಂದರೆಯಾಗುತ್ತದೆ. ಇದರಿಂದ ನಿಮಗೂ ತೊಂದರೆ. ಹೀಗಾಗಿ, ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಎಂದು ದಾಖಲಾತಿ ಡಿಜಟಲೀಕರಣ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ನಂತರ ಅವರು ವಿವಿಧ ಕೊಠಡಿಗಳಿಗೆ ತೆರಳಿ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಸಾರ್ವಜನಿಕರ ಸಮಸ್ಯೆಗಳನ್ನು ನಿಗದಿತ ಸಮಯದಲ್ಲಿ ಬಗೆಹರಿಸಬೇಕು. ಸಲ್ಲದ ನೆಪಗಳನ್ನು ಹೇಳಿ ಅವರನ್ನು ಕಚೇರಿಗೆ ಅಲೆದಾಡಿಸಬೇಡಿ. ಮುಖ್ಯವಾಗಿ ಅವರ ದಾಖಲಾತಿಗಳನ್ನು ಮೊದಲೇ ಪರಿಶೀಲಿಸಿ ಅವರಿಗೆ ತಿಳುವಳಿಕೆ ನೀಡಿ, ಅಗತ್ಯ ದಾಖಲೆಗಳನ್ನು ತರುವಂತೆ ಸೂಚಿಸಿ. ನಿಮಗೂ, ಅವರಿಗೂ ಸಮಸ್ಯೆಗಳಾಗದಂತೆ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಿ ಎಂದರು.
ಉಪ ವಿಭಾಗಾಧಿಕಾರಿ ಗಂಗಪ್ಪ ಎಂ, ತಹಸೀಲ್ದಾರ ನಾಗರಾಜ ಕೆ, ಉಪತಹಸೀಲ್ದಾರ ಜೆ.ಟಿ. ಕೊಪ್ಪದ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈಗ ಎಲ್ಲವೂ ಆಧುನೀಕರಣಗೊಂಡಿದೆ. ನಿಮ್ಮ ಸಾಧನೆಯನ್ನು ಯಂತ್ರಗಳು ಖಚಿತಪಡಿಸುತ್ತವೆ. ನೀವು ಬಾಯಿ ಮಾತಿನಿಂದ ಹೇಳುವುದಲ್ಲ, ಬದಲಾಗಿ ಸಾಧನೆಯನ್ನು ಸಾಕ್ಷೀಕರಿಸಬೇಕು. ಮುಖ್ಯವಾಗಿ ಹಳೆ ದಾಖಲಾತಿಗಳನ್ನು ಡಿಜಟಲೀಕರಣಗೊಳಿಸುವಲ್ಲಿ ರೋಣ ಹಿಂದೆ ಬಿದ್ದಿದೆ. ಇದು ಸರಿಯಾದ ಕ್ರಮವಲ್ಲ. ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಸಮರ್ಥವಾಗಿ ಕಾರ್ಯನಿರ್ವಹಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಸಿಬ್ಬಂದಿಗಳನ್ನು ಎಚ್ಚರಿಸಿದರು.