ಬೆಂಗಳೂರು:- ಬಿಜೆಪಿಯವರು ಎಲ್ಲದ್ರಲ್ಲೂ ರಾಜಕೀಯ ಮಾಡ್ತಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್ ಕಿಡಿಕಾರಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ವಿನಯ್ ಸೋಮಯ್ಯ ಡೆತ್ನೋಟ್ನಲ್ಲಿ ಪೊನ್ನಣ್ಣ, ಮಂಥರ್ ಗೌಡ ಹೆಸರು ಉಲ್ಲೇಖವಾಗಿರುವ ಬಗ್ಗೆ ಮಾತನಾಡಿದರು. ಕಾನೂನು ಎಲ್ಲರಿಗೂ ಒಂದೇ. ಪೊನ್ನಣ್ಣನಿಗೂ ಒಂದೇ, ಮಂಥರ್ ಗೌಡನಿಗೂ ಒಂದೇ. ಯಾರಿಗೂ ಬೇರೆ ಬೇರೆ ಕಾನೂನು ಇಲ್ಲ ಎಂದರು.
ಕಾನೂನಿನಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತದೆ. ಸಿಬಿಐಗೆ ನೀಡುವ ವಿಚಾರದ ಬಗ್ಗೆ ನಿರ್ಧಾರ ಇಲ್ಲ. ಅಗತ್ಯವಿದ್ದರೆ ನೋಡೋಣ ಎಂದರು. ಈ ಹಿಂದೆ ಫೆಬ್ರವರಿಯಲ್ಲಿ ನಡೆದಿರುವ ಘಟನೆಯಿಂದ ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯ ಕುರಿತು ತನಿಖೆ ಮಾಡಲಾಗುತ್ತದೆ. ವಾಟ್ಸಪ್ನಲ್ಲಿ ಹಾಕಿರುವ ಸಂದೇಶದ ಮೇಲೆ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಮಡಿಕೇರಿಯಲ್ಲೂ ಎಫ್ಐಆರ್ ಆಗಿದೆ. ಇಲ್ಲೂ ಎಫ್ಐಆರ್ ಆಗಿದೆ. ಎಲ್ಲವೂ ಸಮಗ್ರ ತನಿಖೆ ಆಗುತ್ತದೆ. ತನಿಖೆ ಆದಮೇಲೆ ಇವರಿಬ್ಬರೂ, ವಿನಯ್ ಆತ್ಮಹತ್ಯೆಗೆ ಕಾರಣರಾಗಿದ್ರಾ ಎಂದು ತಿಳಿದುಬಂದ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿಕೆ ನೀಡಿದರು.
ಡೆತ್ನೋಟ್ ಎನ್ನುವುದೇ ಇಲ್ಲ ಎಂದು ಹೇಳುತ್ತಾರೆ. ವಾಟ್ಸಪ್ನಲ್ಲಿ ಅವರು ಮಾಡಿದ್ದಾರೆ ಎಂದು ಮೊದಲು ಸಾಬೀತು ಆಗಬೇಕಲ್ಲ. ಡೆತ್ನೋಟ್ ಅಥವಾ ವಾಟ್ಸಪ್ ಡೆತ್ನೋಟ್ ಎಂದು ತಗೆದುಕೊಳ್ಳಬಹುದಾ ಎಂದು ಗೊಂದಲವಿದೆ. ಇದರಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡೋಕೆ ಅವಕಾಶ ಇಲ್ಲ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ಅವರ ಮೇಲೆ ಕ್ರಮ ಆಗುತ್ತದೆ. ಹಾಗಾಗಿ ಸಂಪೂರ್ಣ ತನಿಖೆ ಮಾಡಿ ವರದಿ ಕೊಡಬೇಕು ಎಂದು ನಾನು ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.