ವಿಜಯಸಾಕ್ಷಿ ಸುದ್ದಿ, ಗದಗ
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮಹಿಳೆ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಇನ್ನೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇನ್ನೊಬ್ಬ ಗಾಯಗೊಂಡಿದ್ದು ಜಿಮ್ಸ್ ಗೆ ದಾಖಲಾಗಿದ್ದಾರೆ.
ಗದಗ ತಾಲೂಕಿನ ಹರ್ತಿ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರು ಅರ್ಧ ಮರದಲ್ಲಿಯೇ ಸಿಲುಕಿಕೊಂಡಿದ್ದು, ಚಾಲಕ ಮರದಡಿಯಲ್ಲಿಯೇ ಸಿಲುಕಿಕೊಂಡಿದ್ದಾನೆ. ಕಾರಲ್ಲಿದ್ದವರು ಹೊಲದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯ ನೆರದವರ ಕಣ್ಣಲ್ಲಿ ನೀರು ತರಿಸಿದೆ. ಕಾರಿನ ಕೆಲ ಪಾರ್ಟ್ಸ್ ತುಂಡು ತುಂಡಾಗಿ ಬಿದ್ದಿದ್ದು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.
ಗದಗ ತಾಲೂಕಿನ ಲಿಂಗದಾಳದಿಂದ ಲಕ್ಷ್ಮೇಶ್ವರಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುವಾಗ ಈ ದುರ್ಘಟನೆ ನೆಡದಿದೆ.
ಗಾಯಗೊಂಡ ಶಂಕ್ರಪ್ಪ ಎನ್ನುವಾತ ಗ್ರಾಮಸ್ಥರಿಗೆ ಲಿಂಗದಾಳದಿಂದ ಲಕ್ಷ್ಮೇಶ್ವರಕ್ಕೆ ಹೊರಟಿದ್ವೀ ಅಂತ ಮಾಹಿತಿ ನೀಡಿದ್ದಾನೆ.
ಮೃತರು ನವಲಗುಂದ ತಾಲೂಕಿನ ಆರಟ್ಟಿ ಗ್ರಾಮಸ್ಥರು ಎನ್ನಲಾಗಿದೆ. ವೀರೇಶ(26), ಶೇಖಪ್ಪ(45), ಬಾಪೂಗೌಡ (25),ಸಾವಿತ್ರಿ(50) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದವರು.
ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದಾರೆ.