ತೆಲುಗು ಚಿತ್ರರಂಗದ ಖ್ಯಾತ ನಟ, ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕಿರಿಯ ಮಗ ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದಾರೆ. ಮಾರ್ಕ್ ಶಂಕರ್ ಸಿಂಗಾಪುರದಲ್ಲಿ ಶಿಕ್ಷಣ ಪಡೆಯುತ್ತಿದ್ದು ಮಾರ್ಕ್ ಶಂಕರ್ ಓದುತ್ತಿದ್ದ ಶಾಲೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಕೈ ಹಾಗೂ ಕಾಲಿಗೆ ಸುಟ್ಟ ಗಾಯಗಳಾಗಿವೆ. ಈ ಬಗ್ಗೆ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದಾರೆ.
ಮಾರ್ಕ್ ಶಂಕರ್ ಅವರು ಶಾಲೆಯಲ್ಲಿ ಬೇಸಿಗೆ ರಜದಲ್ಲಿ ಭಾಗಿ ಆಗಿದ್ದರು. ಈ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಮಾರ್ಕ್ ಶಂಕರ್ ಜೊತೆ ಇತರ ವಿದ್ಯಾರ್ಥಿಗಳೂ ಇದ್ದರು ಎಂದು ಪವನ್ ಕಲ್ಯಾಣ್ ಅವರು ಹೇಳಿದ್ದಾರೆ. ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಸಮಸ್ಯೆ ಆಗಿದೆ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ.
‘ಶಂಕರ್ ಕಾಲು ಹಾಗೂ ಕೈಗೆ ಸುಟ್ಟ ಗಾಯಗಳಾಗಿವೆ. ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚೇ ಆಗಿದೆ. ಅವನ ಶ್ವಾಸಕೋಶವನ್ನು ಸರಿಪಡಿಸಲು ಬ್ರಾಂಕೋಸ್ಕೋಪಿ ಮಾಡಲಾಗಿದೆ. ಅವನ ದೇಹಕ್ಕೆ ಸಾಕಷ್ಟು ಹೊಗೆ ಸೇರಿದೆ. ನನ್ನ ಮಗನ ಮುಂದೆ ಕುಳಿತಿದ್ದ ಮತ್ತೋರ್ವನಿಗೆ ಇನ್ನೂ ಸಾಕಷ್ಟು ಗಾಯಗಳು ಆಗಿವೆ. ಮತ್ತೋರ್ವ ನಿಧನ ಹೊಂದಿದ್ದಾನೆ’ ಎಂದು ಪವನ್ ಕಲ್ಯಾಣ್ ಮಾಹಿತಿ ನೀಡಿದ್ದಾರೆ.
ಘಟನೆ ಸಂಭವಿಸಿದ ವೇಳೆ ಡಿಸಿಎಂ ಪವನ್ ಕಲ್ಯಾಣ್ ಅವರು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ಪ್ರವಾಸದಲ್ಲಿದ್ದರು. ಮಗನಿಗೆ ಬೆಂಕಿ ತಗುಲಿರುವ ವಿಚಾರ ತಿಳಿಯುತ್ತಿದ್ದಂತೆಯೇ, ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ, ಸಿಂಗಾಪುರಕ್ಕೆ ತೆರಳಿದ್ದಾರೆ.
ಸಿಂಗಾಪುರದ ರಿವರ್ ವ್ಯಾಲಿ ಟೊಮ್ಯಾಟೋ ಕುಕ್ಕಿಂಗ್ ಸ್ಕೂಲ್ನಲ್ಲಿ ಬೆಂಕಿ ದುರಂತ ಸಂಭವಿಸಿದ್ದು, 1 ಒಂದು ಮಗು ಸಾವನ್ನಪ್ಪಿದ್ದು, ಮಕ್ಕಳು ಸೇರಿ 18 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಪವನ್ ಕಲ್ಯಾಣ್ ಮೂರನೇ ಪತ್ನಿ ಅನ್ನಾ ಲೆಜ್ನೇವಾ ಅವರಿಗೆ ಇಬ್ಬರು ಮಕ್ಕಳು ಮಾರ್ಕ್ ಶಂಕರ್ ಮತ್ತು ಪೊಲೇನಾ ಅಂಜನಾ. ಈ ಇಬ್ಬರೂ ಸಹ ಸಿಂಗಪುರದಲ್ಲಿ ನೆಲೆಸಿದ್ದಾರೆ. ಅಲ್ಲಿಯೇ ಶಾಲೆ ಓದುತ್ತಿದ್ದಾರೆ.