ಕೊಚ್ಚಿ: ಕುಂಭಮೇಳದಲ್ಲಿ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ವೇಳೆ ವೈರಲ್ ಆಗಿ ದೇಶಾದ್ಯಂತ ಗಮನ ಸೆಳೆದಿದ್ದ ಮೋನಾಲಿಸಾ ಜೀವನ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಸಿನಿಮಾ ಅವಕಾಶಗಳ ಮೂಲಕ ಹೊಸ ಬದುಕು ಕಟ್ಟಿಕೊಳ್ಳುವ ಹಾದಿಯಲ್ಲಿದ್ದ ಮೋನಾಲಿಸಾ, ನಟ ಫರ್ಮಾನ್ ಖಾನ್ ಅವರನ್ನು ವಿವಾಹವಾದ ಬಳಿಕ ವಿವಾದಗಳ ಸುಳಿಯಲ್ಲಿ ಸಿಲುಕಿದ್ದು, ಇದೀಗ ಜೀವ ಬೆದರಿಕೆ ಆರೋಪದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಪೊಲೀಸ್ ಭದ್ರತೆ ನೀಡುವಂತೆ ಆದೇಶಿಸಿದೆ.
ಕುಂಭಮೇಳದಲ್ಲಿ ವೈರಲ್ ಆದ ನಂತರ ಮೋನಾಲಿಸಾಗೆ ಹಲವು ಸಿನಿಮಾ ಅವಕಾಶಗಳು ಬಂದಿದ್ದವು. ಇದೇ ವೇಳೆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ನಟ ಫರ್ಮಾನ್ ಖಾನ್ ಅವರೊಂದಿಗೆ ಪರಿಚಯ ಬೆಳೆದು ಅದು ಪ್ರೀತಿಗೆ ತಿರುಗಿ, ಬಳಿಕ ಕುಟುಂಬದ ವಿರೋಧದ ನಡುವೆಯೇ ಇಬ್ಬರೂ ವಿವಾಹವಾಗಿದ್ದರು.
ಆದರೆ ಮದುವೆಯ ಬಳಿಕ ಈ ಸಂಬಂಧ ‘ಲವ್ ಜಿಹಾದ್’ ಆರೋಪ, ಕುಟುಂಬದ ತೀವ್ರ ವಿರೋಧ ಹಾಗೂ ಬಾಲ್ಯವಿವಾಹದ ಆರೋಪ ಸೇರಿದಂತೆ ಹಲವು ವಿವಾದಗಳಿಗೆ ಕಾರಣವಾಯಿತು. ಈ ಬೆಳವಣಿಗೆಗಳ ನಡುವೆ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿದ ಮೋನಾಲಿಸಾ, ಕೇರಳ ಹೈಕೋರ್ಟ್ ಮೊರೆ ಹೋಗಿ ಪೊಲೀಸ್ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಮೋನಾಲಿಸಾಗೆ ಅಗತ್ಯ ಪೊಲೀಸ್ ಭದ್ರತೆ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಈ ಆದೇಶದೊಂದಿಗೆ ಮೋನಾಲಿಸಾ ಪ್ರಕರಣ ಮತ್ತೊಮ್ಮೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.



