ಹಾಸನ: ತಾಯಿ ಚೆನ್ನಮ್ಮ ಅವರ ನಿಧನದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ಹೆಚ್.ಡಿ. ರೇವಣ್ಣ (H.D. Revanna), 2001ರ ಆಸಿಡ್ ದಾಳಿ ಪ್ರಕರಣವನ್ನು ನೆನೆದು ಭಾವುಕರಾಗಿ ಕಣ್ಣೀರಿಟ್ಟರು. ಆ ದಾಳಿ ಆಗದೇ ಇದ್ದಿದ್ದರೆ ತಮ್ಮ ತಾಯಿಗೆ ಇಷ್ಟು ಬೇಗ ಸಾವಾಗುತ್ತಿರಲಿಲ್ಲ ಎಂದು ಹೇಳಿದ ಅವರು, ಹಲವು ಬಾರಿ ಭಾವುಕರಾಗಿ ಮಾತು ನಿಲ್ಲಿಸಿದರು.
“2001ರಲ್ಲಿ ಆಸಿಡ್ ದಾಳಿ ಆಗದೇ ಹೋಗಿದ್ದರೆ ನಮ್ಮ ತಾಯಿಗೆ ಇಷ್ಟು ಬೇಗ ಸಾವು ಬರ್ತಿರಲಿಲ್ಲ. ನನ್ನನ್ನು ಮುಗಿಸಬೇಕು ಎಂಬ ಸಂಚು ರೂಪಿಸಲಾಗಿತ್ತು. ಅಂದು ನಾನು ಅಲ್ಲಿದ್ದರೆ ದಾಳಿ ನನ್ನ ಮೇಲೆಯೇ ಆಗುತ್ತಿತ್ತು. ನಾನು ಇರಲಿಲ್ಲ ಎಂಬ ಕಾರಣಕ್ಕೆ ನಮ್ಮ ತಾಯಿ ಆ ನೋವನ್ನು ಅನುಭವಿಸಬೇಕಾಯಿತು. ನಮ್ಮ ತಾಯಿ ದೇವತೆಯಂತೆ ಇಡೀ ಕುಟುಂಬವನ್ನು ಸಾಕಿದರು,” ಎಂದು ರೇವಣ್ಣ ಕಣ್ಣೀರಿಟ್ಟರು.
ತಮ್ಮ ತಂಗಿಯರು ತಾಯಿಯನ್ನು ಕೊನೆಯವರೆಗೂ ಆರೈಕೆ ಮಾಡಿದ್ದು, ತಾವು ಮತ್ತು ಕುಮಾರಸ್ವಾಮಿ ಆಗಾಗ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದೆವು ಎಂದು ಹೇಳಿದರು.
ತಾಯಿ ಚೆನ್ನಮ್ಮ ಅವರ ಕೊನೆಯ ಕ್ಷಣಗಳನ್ನು ಸ್ಮರಿಸಿದ ಅವರು, “ನಮ್ಮ ತಂದೆ ಬಂದು ತಾಯಿಗೆ ಕುಂಕುಮ ಇಟ್ಟು ಹೂ ಮುಡಿಸಿದ ತಕ್ಷಣವೇ ಅವರು ಕೊನೆಯುಸಿರೆಳೆದರು. ಇಂತಹ ಸಾವು ಎಲ್ಲರಿಗೂ ಸಿಗುವುದಿಲ್ಲ. ತಂದೆ-ತಾಯಿ 72 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸಿದ್ದರು. ತಂದೆಯ ರಾಜಕೀಯ ಏಳಿಗೆಯಲ್ಲಿ ತಾಯಿಯ ಪಾತ್ರ ಅಪಾರ. ನಾನು ಮತ್ತು ಕುಮಾರಸ್ವಾಮಿ ಈ ಮಟ್ಟಕ್ಕೆ ಬೆಳೆಯಲು ಅವರೇ ಕಾರಣ,” ಎಂದು ಭಾವುಕರಾದರು.
1962ರಲ್ಲಿ ತಮ್ಮ ತಂದೆ ಎಚ್.ಡಿ. ದೇವೇಗೌಡ ಅವರು ತಿಂಗಳಿಗೆ 10 ರೂಪಾಯಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ನೆನಪುಗಳನ್ನು ಹಂಚಿಕೊಂಡ ರೇವಣ್ಣ, “ಕೊನೆಯ ಮಗಳು ಹುಟ್ಟಿದ್ದು ತಂದೆ ಶಾಸಕನಾದ ಬಳಿಕ. ಅದಕ್ಕಾಗಿ ತಾಯಿಯ ಪಾರ್ಥಿವ ಶರೀರವನ್ನು ಆ ಹಳೆಯ ಬಾಡಿಗೆ ಮನೆಯ ಬಳಿಗೂ ಕೊಂಡೊಯ್ದೆವು,” ಎಂದು ಹೇಳಿದರು.
ಅಂತಿಮ ದರ್ಶನ, ಮೆರವಣಿಗೆ ಮತ್ತು ಅಂತ್ಯಕ್ರಿಯೆ ವ್ಯವಸ್ಥೆಯಲ್ಲಿ ಜಿಲ್ಲಾಡಳಿತ ಉತ್ತಮ ಸಹಕಾರ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, “ರಾಜಕೀಯ ಬೇರೆ, ಮಾನವೀಯತೆ ಬೇರೆ. ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಲು ಸಹಕರಿಸಿದ ಸರ್ಕಾರ, ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಧನ್ಯವಾದಗಳು,” ಎಂದರು.
ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸಿದ ರೇವಣ್ಣ, ಜುಲೈ 30ರಂದು ನಡೆಯಲಿರುವ ಆರಾಧನಾ ಮಹೋತ್ಸವಕ್ಕೆ ಪಕ್ಷಾತೀತವಾಗಿ ಎಲ್ಲರೂ ಆಗಮಿಸಬೇಕು ಎಂದು ಮನವಿ ಮಾಡಿದರು.



