ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹುಟ್ಟುತ್ತ ಅಣ್ಣತಮ್ಮಂದಿರು, ಬೆಳೆಯುತ್ತ ದಯಾದಿಗಳು ಎಂಬ ಗಾದೆಯೇ ಸಾರ್ವಕಾಲಿಕವಾಗಿರುವ ಕಾಲ ಘಟ್ಟದಲ್ಲಿ ತಾಲೂಕಿನ ಗೋವನಾಳ ಗ್ರಾಮದ ಸಹೋದರರು ಸಾವಿನಲ್ಲೂ ಒಂದಾದ ಹೃದಯಸ್ಪರ್ಶಿ ಘಟನೆ ಬುಧವಾರ ನಡೆದಿದೆ. ಒಡಹುಟ್ಟಿದವರು ಜೀವನದಲ್ಲಿ ಹೇಗೆ ಜೋತೆಗೂಡಿ ಬೆಳೆದು ಬಾಳಿದರೋ, ಹಾಗೆ ಇಬ್ಬರು ಸಾವಿನಲ್ಲಿಯೂ ಒಂದಾಗಿರುವ ಘಟನೆಗೆ ಗ್ರಾಮಸ್ಥರ ಹೃದಯ ಮಿಡಿದಿದೆ.
ಬಸವನಗೌಡ ಶಿವನಗೌಡ ಭುವನಗೌಡ್ರ (75) ಇವರ ಸಹೋದರ ಯಲ್ಲಪ್ಪಗೌಡ ಶಿವನಗೌಡ ಭುವನಗೌಡ್ರ (72) ಇಬ್ಬರೂ ಅನ್ಯೋನ್ಯತೆಯಿಂದ ಜೀವನ ಸಾಗಿಸುತ್ತಿರುವದು ಇತರರಿಗೆ ಮಾದರಿಯಾಗಿತ್ತು. ಕಳೆದ 8 ವರ್ಷದಿಂದ ಅಣ್ಣ ಬಸನಗೌಡ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಇತ್ತ ತಮ್ಮ ಯಲ್ಲಪ್ಪಗೌಡ ಕಳೆದ ಒಂದು ವಾರದ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿರುವದೂ ವಿಪರ್ಯಾಸವಾಗಿದೆ.
ಬುಧವಾರ ನಸುಕಿನ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಅಣ್ಣ ಬಸವನಗೌಡ ಸಾವಿಗೀಡಾದ ಸುದ್ದಿ ತಮ್ಮ ಯಲ್ಲಪ್ಪಗೌಡರಿಗೆ ತಿಳಿಯುತ್ತಿದ್ದಂತೆ ಆತನೂ ಅಲ್ಲಿಯೇ ತಕ್ಷಣದಲ್ಲಿ ಪ್ರಾಣ ಬಿಟ್ಟಿದ್ದಾರೆ. ಮೃತ ಸಹೋದರರ ಕುಟುಂಬಸ್ಥರಿಗೆ ಇಬ್ಬರ ಸಾವು ಬರಸಿಡಿಲು ಬಡಿದಂತಾಗಿದೆ. ಇಬ್ಬರ ಮೃತದೇಹಗಳನ್ನು ಗ್ರಾಮಸ್ಥರು ಒಂದೇ ಸ್ಥಳದಲ್ಲಿ ಅಂತ್ಯಸಂಸ್ಕಾರ ಮಾಡಿ ಕಂಬನಿ ಮಿಡಿದರು. ಇಬ್ಬರಿಗೂ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ.