ಯೋಗದಿಂದ ರೋಗ ಮುಕ್ತರಾಗಲು ಸಾಧ್ಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪ್ರಸ್ತುತ ದಿನಮಾನದಲ್ಲಿ ಬಹುಜನತೆಯ ಜೀವನ ಕ್ರಮ ವಿಭಿನ್ನ ರೀತಿಯಲ್ಲಿದೆ. ಬಹಳಷ್ಟು ಜನರು ಐಷಾರಾಮಿ ಜೀವನ ಕ್ರಮ ಮತ್ತು ಟಿ.ವಿ., ಮೊಬೈಲ್‌ಗಳ ಬಳಕೆಯಿಂದ ದೈಹಿಕ ಶ್ರಮ, ಮಾನಸಿಕ ವಿಶ್ರಾಂತಿಗಳನ್ನು ಮರೆತು ಯಾಂತ್ರಿಕ ಜೀವನ ನಡೆಸುತ್ತಿದ್ದಾರೆ. ಇದರಿಂದ ನಾನಾ ರೋಗ-ರುಜಿನ, ತಾಪತ್ರಯಗಳಿಗೆ ಬಲಿಯಾಗಿ ಸಂಕಷ್ಟಗಳ ಸಂಕೋಲೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಸಂಕೋಲೆಯಿಂದ ಬಿಡುಗಡೆಯಾಗಬೇಕಾದರೆ ನಮ್ಮ ಜೀವನ ಕ್ರಮ ಬದಲಾಗಬೇಕು. ನಮ್ಮ ಆಚಾರ-ವಿಚಾರ, ಆಹಾರ-ವಿಹಾರ, ಉಡಿಗೆ-ತೊಡಿಗೆ, ನಡೆ-ನುಡಿ, ಅರಿವು-ಅನುಕರಣೆಗಳೆಲ್ಲವೂ ಯೋಗಮಯವಾಗಿರಬೇಕು ಎಂದು ಜ. ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷರು ಮತ್ತು ಖ್ಯಾತ ವೈದ್ಯರಾದ ಡಾ. ಧನೇಶ ದೇಸಾಯಿ ಹೇಳಿದರು.

Advertisement

ಜ. ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ, ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆ ಸಹಯೋಗದಲ್ಲಿ ಒಂದು ವಾರದ ಕಾಲ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅನುಭವ ಮಂಟಪ (ಶ್ರೀಮಠದ ಆವರಣ)ದಲ್ಲಿ ನಡೆಸಿದ ಉಚಿತ ಯೋಗ ತರಬೇತಿ ಶಿಬಿರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಉಪನ್ಯಾಸಕಿ ಶಕುಂತಲಾ ಸಿಂಧೂರ ಮಾತನಾಡಿ, ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿರುವುದು ಸಂತೋಷ. ಮಹಿಳೆ ಆರೋಗ್ಯದಿಂದಿದ್ದರೆ ಇಡೀ ಕುಟುಂಬ ಆರೋಗ್ಯದಿಂದಿರುವುದು. ಆರೋಗ್ಯ ಕುಟುಂಬಗಳಿಂದ ಆರೋಗ್ಯವಂತ ಸಮಾಜ ನಿರ್ಮಾಣಗೊಳ್ಳುವದೆಂದು ಹೇಳಿದರು.

ಸಮಾರಂಭಕ್ಕೆ ದಯಮಾಡಿಸಿದ ಶೇಗುಣಸಿ ವಿರಕ್ತಮಠದ ಪೂಜ್ಯಶ್ರೀ ಮಹಾಂತಪ್ರಭು ಮಹಾಸ್ವಾಮಿಗಳು ಆಶೀರ್ವಚನ ದಯಪಾಲಿಸಿದರು.

ವೇದಿಕೆಯಲ್ಲಿ ಜ. ತೋಂಟದಾರ್ಯ ಜಾತ್ರಾಮಹೋತ್ಸವ ಸಮಿತಿ ಉಪಾಧ್ಯಕ್ಷೆ ಶೈಲಾ ಕೋಡೆಕಲ್, ಕಾರ್ಯದರ್ಶಿ ಶಿವಪ್ಪ ಕತ್ತಿ, ಶಿಬಿರ ಶಿಕ್ಷಕ ಆಂಜನೇಶ ಮಾನೆ, ಶಿಕ್ಷಕಿ ಶೋಭಾ ಗುಗ್ಗರಿ, ಪತಂಜಲಿ ಜಿಲ್ಲಾ ಪ್ರಭಾರಿ ಗಿರಿಯಪ್ಪ ಮಡಿವಾಳರ, ಶಿಬಿರ ಮಾರ್ಗದರ್ಶಕ, ಯೋಗಾಚಾರ್ಯ ಕೆ.ಎಸ್. ಪಲ್ಲದ, ಹಿರಿಯರಾದ ಗೌರಕ್ಕ ಬಡಿಗಣ್ಣವರ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳ ಪರವಾಗಿ ಬಸವರಾಜ ಹಿರೇಮಠ, ವಿದ್ಯಾಶ್ರೀ ಮಾವಿನಮರದ ಅನಿಸಿಕೆಗಳನ್ನು ತಿಳಿಸಿದರು. ಲತಾ ಮಾನೆ ಪ್ರಾರ್ಥನೆ ಹೇಳಿದರು. ಶೋಭಾ ಬೆಂಗಳೂರು ಸ್ವಾಗತ ಕೋರಿದರು. ಶ್ರೀಮಠದ ಭಕ್ತರಾದ ಶಿವಬಸಪ್ಪ ಯಂಡಿಗೇರಿ ಕಾರ್ಯಕ್ರಮ ನಿರೂಪಿಸಿದರು.ಸುಜಾತಾ ಅಂಬಕ್ಕಿ ವಂದಿಸಿದರು.

ನಮಗೆ ಮೊದಲು ಮನಸ್ಸಿಗೆ ಬರುವ ರೋಗ ನಂತರ ದೇಹಕ್ಕೆ ವ್ಯಾಪಿಸುವದು. ದೇಹದ ರೋಗವನ್ನು ವೈದ್ಯರು ಗುಣಪಡಿಸಬಹುದು. ಆದರೆ ಮನೋವ್ಯಾಧಿಗೆ ಯೋಗ ಚಿಕಿತ್ಸೆ ಬೇಕು. ನೀವೆಲ್ಲರೂ ಈ ಶಿಬಿರದಲ್ಲಿ ಪಡೆದ ಯೋಗ ವಿಜ್ಞಾನವನ್ನು ಹೆಚ್ಚಿಸಿಕೊಂಡು ನಿತ್ಯ ಯೋಗಾಭ್ಯಾಸ ಮಾಡಿ ನಿರೋಗಿಯಾಗಿ ಬಾಳಿರೆಂದು ಡಾ. ಧನೇಶ ದೇಸಾಯಿ ಶಿಬಿರಾರ್ಥಿಗಳಿಗೆ ಸೂಚಿಸಿದರು.


Spread the love

LEAVE A REPLY

Please enter your comment!
Please enter your name here