ವಿಜಯಸಾಕ್ಷಿ ಸುದ್ದಿ, ಗಜೇಂದ್ರಗಡ: ಬೇಸಿಗೆಯಲ್ಲಿ ದುಡಿಯುವ ಕೈಗೆ ಕೆಲಸ ಇಲ್ಲ ಎಂಬ ಚಿಂತೆ ಬೇಡ. ನರೇಗಾ ಕಾರ್ಮಿಕರಿಗೆ ಇದ್ದೂರಲ್ಲೇ ಕೆಲಸ ನೀಡಿ ದಿನವೊಂದಕ್ಕೆ 370 ರೂಪಾಯಿ ಹಣ ಜಮಾವಣೆ ಮಾಡಲಾಗುವುದು ಎಂದು ಗಜೇಂದ್ರಗಡ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಂಜುಳಾ ಹಕಾರಿ ಹೇಳಿದರು.
ತಾಲೂಕಿನ ಮುಶಿಗೇರಿ ಗ್ರಾ.ಪಂ ವ್ಯಾಪ್ತಿಯ ಚಿಕ್ಕಅಳಗುಂಡಿ ಗ್ರಾಮದಲ್ಲಿ ನರೇಗಾ ಸಮುದಾಯ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ನರೇಗಾ ಕಾರ್ಮಿಕರೊಂದಿಗೆ ಸಮಾಲೋಚನೆ ನಡೆಸಿ ಅವರು ಮಾತನಾಡಿದರು.
ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಬೇಸಿಗೆ ಅವಧಿಯಲ್ಲಿ ತಾಲೂಕಿನ ಗ್ರಾಮ ಪಂಚಾಯಿತಿಗಳು ಹಲವು ಕಾಮಗಾರಿಗಳಲ್ಲಿ ಕೆಲಸ ನೀಡುತ್ತವೆ. ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಕೆಲಸ ಪಡೆದುಕೊಂಡು ತಮ್ಮ ಆರ್ಥಿಕ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕು. ಯೋಜನೆಯಡಿ ಪಡೆಯುವ ಹಣ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಮಳೆ ಬಿದ್ದ ಬಳಿಕ ಕೃಷಿ ಚಟುವಟಿಕೆಗಳಿಗೆ ಬೀಜ-ಗೊಬ್ಬರ ಖರೀದಿಗೆ ಸಹಾಯಕವಾಗುತ್ತದೆ. ಮಳೆ ಬಿದ್ದು ಕೃಷಿ ಚಟುವಟಿಕೆ ಕೆಲಸ ಆರಂಭವಾಗುವವರೆಗೂ ನರೇಗಾ ಯೋಜನೆಯಡಿ ಕೆಲಸ ಕೊಡಲಾಗುವುದು. ಹೀಗಾಗಿ ಪರಸ್ಥಳಕ್ಕೆ ಯಾರೂ ವಲಸೆ ಹೋಗದೇ ಬೇಸಿಗೆ ಅವಧಿಯಲ್ಲಿ ಇದ್ದೂರಲ್ಲೇ ಕೆಲಸ ಮಾಡಿ ಎಂದು ತಿಳಿಸಿದರು.
ನರೇಗಾ ಸಮುದಾಯ ಕಾಮಗಾರಿಯಡಿ ಅಳತೆಗೆ ತಕ್ಕಂತೆ ಕೆಲಸ ಮಾಡಿದರೆ ದಿನಕ್ಕೆ 370 ರೂಪಾಯಿ ಕೂಲಿ ಕಾರ್ಮಿಕರ ವೈಯಕ್ತಿಕ ಖಾತೆಗೆ ಜಮಾವಣೆಯಾಗುತ್ತದೆ. ಜೊತೆಗೆ ಕೂಲಿ ಕಾರ್ಮಿಕರ ಹಾಜರಾತಿಗೆ ದಿನವೊಂದಕ್ಕೆ ಎರಡು ಪೋಟೋಗಳನ್ನು ತಗೆಯಲಾಗುವುದು. ಎರಡು ಪೋಟೋಗಳಲ್ಲಿ ಕೂಲಿ ಕಾರ್ಮಿಕರು ಇದ್ದರೆ ಮಾತ್ರ ದಿನದ ಕೂಲಿಮೊತ್ತ ಕಾರ್ಮಿಕರ ಖಾತೆಗೆ ಜಮಾವಣೆಯಾಗುತ್ತದೆ. ಇದನ್ನು ಕೂಲಿ ಕಾರ್ಮಿಕರು ಅರ್ಥೆÊಸಿಕೊಂಡು ಸರಿಯಾಗಿ ಹಾಜರಾತಿ ನಿರ್ವಹಣೆಯಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.
ಈ ಸಂರ್ಭದಲ್ಲಿ ಮುಶಿಗೇರಿ ಗ್ರಾ.ಪಂ ಸದಸ್ಯರಾದ ಮಲ್ಲಪ್ಪ ಹುಲ್ಲೂರು, ಕವಿತಾ ಸಂಗಪ್ಪ ಲಗುಬಗಿ, ಪಿಡಿಒ ಮಂಜುನಾಥ ಮೇಟಿ, ತಾ.ಪಂ ನರೇಗಾ ವಿಭಾಗದ ತಾಂತ್ರಿಕ ಸಂಯೋಜಕ ಪ್ರಕಾಶ್ ಮ್ಯಾಕಲ್, ಗ್ರಾಮ ಕಾಯಕ ಮಿತ್ರ ಪ್ರೇಮಾ ಹಿರೇಮಠ, ಬಿಎಫ್ಟಿ ಶಂಕರಗೌಡ ಪಾಟೀಲ್, ಕಾಯಕ ಬಂಧುಗಳು ಮತ್ತು ಗ್ರಾ.ಪಂ ಸಿಬ್ಬಂದಿ ಹಾಜರಿದ್ದರು.
ಬಳಿಕ ನರೇಗಾ ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದ ಮಂಜುಳಾ ಹಕಾರಿ, ಬೇಸಿಗೆ ಅವಧಿಯಲ್ಲಿ ನರೇಗಾ ಸಮುದಾಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಕೂಲಿ ಕಾರ್ಮಿಕರ ಸಂಖ್ಯೆಗೆ ಅನುಗುಣವಾಗಿ ನೆರಳಿನ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವಂತೆ ಗ್ರಾ.ಪಂ ಸಿಬ್ಬಂದಿಗೆ ಸೂಚನೆ ನೀಡಿದರು.