ಐಪಿಎಲ್ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀನಾಯವಾಗಿ ಸೋಲು ಕಂಡಿದೆ. ಅಭಿಷೇಕ್ ಪೊರೆಲ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಅವರ ಅರ್ಧಶತಕದಿಂದ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ಗಳಿಂದ ಅಮೋಘವಾದ ವಿಜಯ ದಾಖಲಿಸಿದೆ.
ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, ಪಂದ್ಯವು ಹೀಗೆ ನಡೆಯುತ್ತದೆ, ಹೀಗೆ ಆಗುತ್ತದೆ ಎಂದು ಯಾರನ್ನೂ ದೂರನ್ನು ಸಾಧ್ಯವಿಲ್ಲ. ಏಕೆಂದರೆ ಎರಡನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಸುಲಭವಾಗುತ್ತದೆ. ಹೀಗಾಗಿ ನಾವು ಸೋಲನುಭವಿಸಿದ್ದೇವೆ ಎಂದರು.
ಲಕ್ನೋ ಪಂದ್ಯಗಳಲ್ಲಿ ಟಾಸ್ ದೊಡ್ಡ ಪಾತ್ರ ವಹಿಸುತ್ತಿದೆ. ಹೀಗಾಗಿ ಸೋಲಿಗೆ ನಾನು ನೆಪಗಳನ್ನು ಹುಡುಕುತ್ತಿಲ್ಲ. ಇದಾಗ್ಯೂ ನಾವು ಈ ಪಂದ್ಯದಲ್ಲಿ 20 ರನ್ಗಳನ್ನು ಕಡಿಮೆ ಕಲೆಹಾಕಿದ್ದೆವು. ಇದು ಸಹ ಒಂದು ಕಾರಣ ಎಂದು ರಿಷಭ್ ಪಂತ್ ಹೇಳಿದ್ದಾರೆ.
ಇನ್ನು ನೀವೇಕೆ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪಂತ್, ನಾವು ಸಂದರ್ಭಗಳ ಲಾಭವನ್ನು ಪಡೆಯಲು ಬಯಸಿದ್ದೆವು. ಅದಕ್ಕಾಗಿ ನಾನು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ಈ ಪಿಚ್ನ ಸಂಪೂರ್ಣ ಲಾಭ ಪಡೆಯಲು ನಾವು ಅಬ್ದುಲ್ ಸಮದ್ ಅವರನ್ನು ಮೇಲಿನ ಕ್ರಮಾಂಕದಲ್ಲಿ ಕಳಿಸಿದೆವು. ಆ ಬಳಿಕ ಡೇವಿಡ್ ಮಿಲ್ಲರ್ಗೆ ಅವಕಾಶ ನೀಡಿದೆವು. ಆದರೆ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಮೂಡಿ ಬಂದಿರಲಿಲ್ಲ ಎಂದು ರಿಷಭ್ ಪಂತ್ ಹೇಳಿದ್ದಾರೆ.