ಚಾಮರಾಜನಗರ:- ಸಮಾಜದಲ್ಲಿ ಒಂದು ಧರ್ಮ, ಜಾತಿಯಿಂದ ನ್ಯಾಯ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಿರುವವರೆಗೆ ಎಲ್ಲಾ ವರ್ಗದ ಜನರ ಪರವಾಗಿ ಇರುತ್ತೇನೆ. ನಾನು ಒಂದು ಧರ್ಮದ ಪರವಾಗಿ ಇಲ್ಲ. ನಮ್ಮ ಜನರನ್ನು ಮರೆಯುವುದಿಲ್ಲ. ಸಮಾಜದಲ್ಲಿ ಒಂದು ಧರ್ಮ, ಜಾತಿಯಿಂದ ನ್ಯಾಯ ಕೊಡಲು ಸಾಧ್ಯವಿಲ್ಲ. ಎಲ್ಲರ ಬೆಂಬಲ ಹಾಗೂ ಸಹಕಾರ ಮುಖ್ಯವಾಗಿದೆ. ಇಡೀ ರಾಜ್ಯದಲ್ಲಿ ಅಹಿಂದ ವರ್ಗದ ಜನರು ಹಾಗೂ ಬಡವರು ಸಹಾಯ ಮಾಡಿದ್ದಾರೆ. ಸಿಎಂ ಆಗುವುದು ಅಷ್ಟು ಸುಲಭದ ಕೆಲಸವಲ್ಲ ಎಂದರು.
ಚಾಮರಾಜನಗರವು ಬಹಳ ಹಿಂದುಳಿದ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕಡಿಮೆ. ಶಿಕ್ಷಣಕ್ಕೆ ಆದ್ಯತೆ ಕೊಡಬೇಕಾಗಿದೆ. ಸಮುದಾಯ ಭವನದಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಭವನವನ್ನು ಮಾಡಬೇಕು. ಅಲ್ಲದೇ ಚಾಮರಾಜನಗರದ ಎಲ್ಲಾ ಅಹಿಂದ ವರ್ಗದ ಜನರು ಮುಖ್ಯ ವಾಹಿನಿಗೆ ಬರಬೇಕು. ಇದಕ್ಕೆ ಸರ್ಕಾರ ಅನೇಕ ಕಾರ್ಯಕ್ರಮ ಮಾಡಿದೆ ಎಂದು ಹೇಳಿದರು.