ಬೆಳಗಾವಿ :- 15 ಸಾವಿರ ಸಾಲ ವಾಪಸ್ ಕೇಳಿದ್ದಕ್ಕೆ ಮಹಿಳೆಯ ಹತ್ಯೆ ನಡೆದಿರುವ ಘಟನೆ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಜರುಗಿದೆ. ಘಟನೆಗೆ ಸಂಬಂಧಿಸಿದಂತೆ ತಾಯಿ, ಮಗಳು ಸೇರಿ ಅಪ್ರಾಪ್ತ ಪುತ್ರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜ್ಯೋತಿ ಬಾಂದೇಕರ್, ಸುಹಾನಿ ಬಾಂದೇಕರ್ ಹಾಗೂ ಕೊಲೆಗೆ ಸಾಥ್ ಕೊಟ್ಟ ಅಪ್ರಾಪ್ತ ಬಂಧಿತರು. ಗಣೇಶಪುರದ ಅಪಾರ್ಟ್ಮೆಂಟ್ನಲ್ಲಿ ಏ.22 ರಂದು ಅಂಜನಾ ದಡ್ಡೀಕರ್ನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಅಲ್ಲದೇ ಪೊಲೀಸರ ದಿಕ್ಕು ತಪ್ಪಿಸಲು ಆರೋಪಿಗಳು ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.
ಕೊಲೆಯಾದ ಅಂಜನಾ 15 ಸಾವಿರ ರೂ. ಸಾಲ ವಾಪಸ್ ಕೇಳಿದ್ದಕ್ಕೆ ಆರೋಪಿಗಳು ಗಲಾಟೆ ಮಾಡಿ, ಹಲ್ಲೆ ಮಾಡಿದ್ದರು. ಈ ವೇಳೆ ತಲೆಗೆ ಪೆಟ್ಟಾಗಿ, ಅಂಜನಾ ಸಾವನ್ನಪ್ಪಿದ್ದಳು. ಬಳಿಕ ಅನುಮಾನ ಬರದಂತೆ, ಮಕ್ಕಳನ್ನು ಬಚಾವ್ ಮಾಡಲು ಮಹಿಳೆಯ ಚಿನ್ನಾಭರಣ ಕದ್ದಿದ್ದಳು. ಇಷ್ಟೇ ಅಲ್ಲದೇ ಘಟನೆ ನಡೆದ ದಿನ ಊರಲ್ಲಿ ಇರಲಿಲ್ಲ ಎಂಬಂತೆ ಬಿಂಬಿಸಿದ್ದರು.
ಆದರೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.