ಬೆಂಗಳೂರು:- ಇತ್ತೀಚೆಗೆ ಜನಿವಾರ ಧರಿಸಿ ಸಿಇಟಿ ಬರೆಯಲು ಪ್ರವೇಶ ನಿರಾಕರಿಸಿದ ಪ್ರಕರಣ ಕರ್ನಾಟಕದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ ಕೇಂದ್ರ ಸರ್ಕಾರದ ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಪರೀಕ್ಷೆಯಲ್ಲೂ ಮಂಗಳಸೂತ್ರ ಮತ್ತು ಧರ್ಮದ ಸಂಕೇತಗಳನ್ನು ಧರಿಸದಂತೆ ಸೂಚನೆ ನೀಡಲಾಗಿತ್ತು. ಇದು ಹಿಂದೂಗಳನ್ನು ಮತ್ತಷ್ಟು ಕೆರಳಿಸುವಂತೆ ಮಾಡಿತ್ತು.
ಹೀಗಾಗಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ರೈಲ್ವೇ ಇಲಾಖೆ ಇಂದು ಅಧಿಕೃತ ಆದೇಶ ಹೊರಡಿಸಿದೆ. ರೈಲ್ವೇ ಪರೀಕ್ಷೆಗೆ ಮಂಗಳಸೂತ್ರ, ಜನಿವಾರ ತೆಗೆಸುವಂತಿಲ್ಲ ಎಂದು ತನ್ನ ಆದೇಶದಲ್ಲಿ ನಮೂದಿಸಿದೆ. ಜನಿವಾರ ವಿವಾದದಿಂದಾಗಿ ತೀವ್ರ ಟೀಕೆ, ಅಸಮಾಧಾನ ವ್ಯಕ್ತವಾಗಿದ್ದ ಬೆನ್ನಲ್ಲೇ ಈಗ ನಿರ್ಬಂಧ ಸಡಿಲಿಸಲಾಗಿದೆ. ಈ ಹಿಂದೆ ಹೊರಡಿಸಿದ ಮಾರ್ಗಸೂಚಿಯಲ್ಲಿ ಅಭ್ಯರ್ಥಿಗಳು ಜನಿವಾರ, ಮಾಂಗಲ್ಯ ಸೂತ್ರ ತೆಗೆದಿಟ್ಟು ಪರೀಕ್ಷೆ ಬರೆಯಬೇಕೆಂದು ಉಲ್ಲೇಖಿಸಲಾಗಿತ್ತು.
ಈ ಬಗ್ಗೆ ಸಂಸದರು, ಶಾಸಕರು ಮನವಿ ಮಾಡಿದ ಹಿನ್ನೆಲೆ ಟ್ವೀಟ್ ಮೂಲಕ ಕೇಂದ್ರ ಸಚಿವ ಸೋಮಣ್ಣ ಗೊಂದಲಕ್ಕೆ ಇತಿಶ್ರೀ ಹಾಡಿದ್ದಾರೆ. ಜನಿವಾರ, ಮಾಂಗಲ್ಯ, ಸಂಸ್ಕೃತಿ ಬಿಂಬಿಸುವ ಯಾವುದೇ ವಸ್ತು ಧರಿಸಿ ಬಂದಲ್ಲಿ ಅಭ್ಯರ್ಥಿಗಳಿಗೆ ತೊಂದರೆ ನೀಡಬಾರದೆಂದು ಸೂಚಿಸಲಾಗಿದೆ.