ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿ ವತಿಯಿಂದ ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆಯನ್ನು ಕೈಗೊಂಡರು.
ಪ್ರತಿಭಟನೆಯನ್ನುದ್ದೇಶಿಸಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಇ. ಆನಂದ್ ಮಾತನಾಡಿ, ರಾಜ್ಯದಲ್ಲಿ ಬೆಲೆ ಏರಿಕೆಯು ಜನ ಸಾಮಾನ್ಯರ ಬದುಕನ್ನು ದುಸ್ತರಗೊಳಿಸಿದೆ. ಅಗತ್ಯ ವಸ್ತುಗಳ ದರಗಳು ಗಗನಕ್ಕೇರುತ್ತಿದ್ದು, ಇದರಿಂದ ಬಡವರು, ಮಧ್ಯಮ ವರ್ಗದವರು ತೀವ್ರ ಸಂಕಟಕ್ಕೆ ಗುರಿಯಾಗಿದ್ದಾರೆ ಎಂದರು.
ರಾಷ್ಟ್ರೀಯ ಮಹಿಳಾ ವಿಭಾಗದ ಅಧ್ಯಕ್ಷೆ ಉಮಾ ವಿ ಮಾತನಾಡಿ, ಬೆಲೆ ಏರಿಕೆಯ ಬಗ್ಗೆ ಸರ್ಕಾರ ಸೂಕ್ತ ಗಮನ ಹರಿಸದ ಕಾರಣ ಜನರಲ್ಲಿ ಈಗ ಆಕ್ರೋಶ ಹೆಚ್ಚಾಗಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕದೇ, ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದೆ. ವಿರೋಧ ಪಕ್ಷ ಬಿಜೆಪಿ ಸಹ ರಾಜ್ಯ ಸರ್ಕಾರದ ವಿರುದ್ಧ ಮುಷ್ಕರ ಮಾಡುತ್ತಾ ಜನರ ಗಮನವನ್ನು ಬೇರೆಡೆ ಸೆಳೆದು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದರು.
ಈ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಕಾರ್ಮಿಕ ವಿಭಾಗದ ಅಧ್ಯಕ್ಷ ಶಿವಾಜಿರಾವ್, ರಾಜ್ಯ ಮಹಿಳಾ ಅಧ್ಯಕ್ಷತೆ ಪದ್ಮಾವತಿ, ಓ.ಬಿ.ಸಿ ರಾಜ್ಯಾಧ್ಯಕ್ಷ ಚಂದ್ರಶೇಖರ್, ರಾಜ್ಯ ಎಸ್.ಸಿ-ಎಸ್.ಟಿ ವಿಭಾಗದ ಅಧ್ಯಕ್ಷ ಶಿವಶಂಕರ್, ಮಹಿಳಾ ಮುಖಂಡರಾದ ಶಾರದ, ಶೋಭ, ಅನುರಾಧ, ವಿಜಯಲಕ್ಷ್ಮೀ, ಶಾಂತಮ್ಮ ಸೇರಿದಂತೆ ರಾಜ್ಯದ ವಿವಿದ ಭಾಗಗಳಿಂದ ಆಗಮಿಸಿದ ಇಂಡಿಯನ್ ಪೊಲಿಟಿಕಲ್ ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳೆಯರು ಭಾಗವಹಿಸಿದ್ದರು.
ರಾಜ್ಯಾಧ್ಯಕ್ಷ ಎಸ್.ಎಸ್. ರೆಡ್ಡೇರ ಮಾತನಾಡಿ, ಸರ್ಕಾರಗಳು ಕೂಡಲೇ ಈ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕ್ರಮವಹಿಸದೇ ಹೋದರೆ ರಾಜ್ಯದ ಎಲ್ಲಾ ಹಂತದ ಆರ್ಥಿಕ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. ಇದರಿಂದ ಉತ್ಪನ್ನ ಸಂಸ್ಥೆಗಳು ಮುಚ್ಚುತ್ತದೆ, ಜನರಿಗೆ ಉದ್ಯೋಗ ಇಲ್ಲದೆ ಬೀದಿಗೆ ಬೀಳುವ ಪರಿಸ್ಥಿತಿ ಬರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಈ ಕೂಡಲೇ ಏರುತ್ತಿರುವ ವಿದ್ಯುತ್, ನೀರು, ಹಾಲು, ಅಡುಗೆ ಅನಿಲ, ಪೆಟ್ರೋಲ್, ಪ್ರಯಾಣ ದರ ಇತ್ಯಾದಿಗಳನ್ನು ನಿಯಂತ್ರಿಸಬೇಕು ಮತ್ತು ಇಳಿಕೆ ಮಾಡಬೇಕೆಂದು ಒತ್ತಾಯಿಸಿದರು.