ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಎಲ್ಲ ಇಂದ್ರಿಯಗಳಲ್ಲಿ ನೇತ್ರ ಅತಿ ಮುಖ್ಯವಾದ ಇಂದ್ರಿಯವಾಗಿದ್ದು, ನೇತ್ರದ ಬಗ್ಗೆ ನಿಷ್ಕಾಳಜಿ ವಹಿಸಿದರೆ ಅಂಧತ್ವಕ್ಕೆ ಎಡೆ ಮಾಡಿಕೊಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಅವರು ಜನರ ನೇತ್ರದ ಬಗ್ಗೆ ಕಾಳಜಿ ಮಾಡುವ ಮೂಲಕ ಸಮಾಜಕ್ಕೆ ಅತ್ಯಮೂಲ್ಯ ಕೊಡುಗೆ ನೀಡುತ್ತಿದ್ದಾರೆ ಎಂದು ಶಿರಹಟ್ಟಿ ಸಂಸ್ಥಾನಮಠದ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.
ಅವರು ಮಂಗಳವಾರ ಪಟ್ಟಣದ ಶ್ರೀ ಫಕೀರೇಶ್ವರ ಮಠದ ಆವರಣದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ಪದ್ಮಶ್ರೀ ಡಾ. ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಎಸ್.ಜಿ.ಎಂ ನೇತ್ರ ಭಂಡಾರ ಹಾಗೂ ಸಂಶೋಧನಾ ಪ್ರತಿಷ್ಠಾನ ಮತ್ತು ಮಹಾದೇವ ಕರಮರಿ ಚಾರಿಟೇಬಲ್ ಟ್ರಸ್ಟ್ ಇವರ ಸಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಾಗೂ ದೃಷ್ಟಿ ಕೇಂದ್ರದ ಉದ್ಘಾಟನೆಯನ್ನು ನೆರವೇರಿಸಿ, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಮಾತನಾಡಿದರು.
ಡಾ. ಶ್ರೀನಿವಾಸ ಜೋಶಿ ಮಾತನಾಡಿ, ಸಮಾಜದಲ್ಲಿ ಜನರು ಕಣ್ಣಿಗೆ ಏನು ತೊಂದರೆಯಾಗುತ್ತಿದೆ ಎನ್ನುವದು ಗೊತ್ತಿರುವದಿಲ್ಲ. ಚಿಕಿತ್ಸೆ ಮಾಡಿಸುವ ಹಣಕಾಸಿನ ಸಮಸ್ಯೆ, ಹೆದರಿಕೆ, ದಿನಗೂಲಿ ಕಳೆದುಕೊಳ್ಳುವ ಭಯ ಇವುಗಳಿಂದ ಕಣ್ಣಿನ ಚಿಕಿತ್ಸೆ ಮಾಡಿಸಿಕೊಂಡಿರುವದಿಲ್ಲ. ಹೀಗಾಗಿ ಡಾ. ಎಂ.ಎಂ. ಜೋಶಿಯವರ ದೂರದೃಷ್ಟಿಯಿಂದ ತಾಲೂಕಿನಲ್ಲಿ ಒಂದು ದೃಷ್ಟಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಜನರಿಗೆ ಸುಲಭವಾಗಿ ನೇತ್ರದ ಚಿಕಿತ್ಸೆಗಳು ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಸಂಸ್ಥೆಯಿಂದ ಈಗಾಗಲೇ ಸುಮಾರು 21 ದೃಷ್ಟಿಕೇಂದ್ರಗಳನ್ನು ತೆರೆಯಲಾಗಿದ್ದು, ಇದು 22ನೇ ಕೇಂದ್ರವಾಗಿದೆ. ಇಲ್ಲಿರುವ ಸಿಬ್ಬಂದಿಗಳು ತಾಲೂಕಿನ ಪ್ರತಿ ಮನೆಯನ್ನು ಸಂದರ್ಶಿಸಿ ಕಣ್ಣಿನ ಸಮಸ್ಯೆಗಳ ಕುರಿತು ತಿಳಿಹೇಳುವ ಕಾರ್ಯವನ್ನು ಮಾಡಲಾಗುತ್ತದೆ. ಇದಕ್ಕೆ ಯಾವುದೇ ಹಣ ಪಡೆಯುವದಿಲ್ಲ. ಇದೀಗ ಶಿಬಿರದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ. ದೃಷ್ಟಿ ಕೇಂದ್ರವನ್ನು ಜನರ ಉಪಯೋಗಕ್ಕಾಗಿ ತೆರೆಯಲಾಗಿದೆ. ಇದರಲ್ಲಿ ಯಾವುದೇ ದುಡ್ಡು ಮಾಡುವ ಉದ್ದೇಶವಿಲ್ಲ, ಅನಗತ್ಯ ಅಂಧತ್ವ ಮುಕ್ತ ಮಾಡುವ ಉದ್ದೇಶಕ್ಕೆ ಜನರ ಸಹಕಾರ ಅವಶ್ಯ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಮಹಾದೇವ ಕರಮರಿ, ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ, ನಂದಕುಮಾರ ವೈ.ಎಸ್., ಶೇಷಗಿರಿ ಕುಲಕರ್ಣಿ, ಕುತ್ಬುದ್ಧಿನ್ ಮುಲ್ಲಾ, ಡಾ. ಮಯೂರ ಕುಲಕರ್ಣಿ, ಡಾ. ಆಶೀಶ್ ಸಿಂಗ್, ಮಾರ್ಟಿನ್ ದಾಸರಿ, ಆಕಾಶ ನರವಟೆ, ಶ್ರೀನಿವಾಸ ಕುಲಕರ್ಣಿ, ವಾಣಿ ರಸಾಳಕರ ಸೇರಿದಂತೆ ಅನೇಕರಿದ್ದರು.
ನೇತ್ರದ ಸಮಸ್ಯೆಗಳ ಬಗ್ಗೆ ಹಳ್ಳಿ ಹಳ್ಳಿಗಳಿಗೆ ಹೋಗಿ ಅವರಿಗೆ ಉಚಿತ ಚಿಕಿತ್ಸೆ ನೀಡುವ ಬಹುದೊಡ್ಡ ಪರೋಪಕಾರಿ ಕಾರ್ಯವನ್ನು ಡಾ. ಎಂ.ಎಂ. ಜೋಶಿಯವರು ಈ ನಾಡಿಗೆ ನೀಡುತ್ತಿದ್ದಾರೆ. ಇದೀಗ ಪ್ರಾರಂಭವಾಗಿರುವ ನೇತ್ರಾಲಯ ಎಲ್ಲರಿಗೂ ಅನೂಕೂಲವಾಗಲಿದ್ದು, ಜನರು ಪ್ರಯೋಜನ ಪಡೆಯುವಂತೆ ಶ್ರೀ ಫಕೀರ ಸಿದ್ಧರಾಮ ಮಹಾಸ್ವಾಮಿಗಳು ಕರೆ ನೀಡಿದರು.