ವಿಜಯಸಾಕ್ಷಿ ಸುದ್ದಿ, ಗದಗ: ಪುಸ್ತಕಗಳು ನಮ್ಮ ಸಹಾಯಕ್ಕೆ ಸದಾ ಸಿದ್ಧವಾಗಿರುತ್ತವೆ. ಅಪಾರವಾದ ಜ್ಞಾನ ಕೋಶದ ಪ್ರಾಪ್ತಿ ಪುಸ್ತಕಗಳಲ್ಲಿದೆ. ಆದ್ದರಿಂದ ಪುಸ್ತಕಗಳು ದೇವ ಮಂದಿರದ ಚಿನ್ನದ ಪಾತ್ರೆಗಳು. ಪ್ರತಿಯೊಬ್ಬರೂ ಪುಸ್ತಕ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಅಶ್ವಿನಿ ಕೆ.ಬಳಿಗೇರ ಅಭಿಪ್ರಾಯಪಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2743ನೇ ಶಿವಾನುಭವದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಗ್ರಂಥಾಲಯಗಳಲ್ಲಿ ಹೋಗಿ ಕುಳಿತಾಗ ನಮ್ಮ ಮುಂದೆ ವಿಶಾಲವಾದ ಪುಸ್ತಕಗಳ ರಾಶಿಯೇ ಬೀಳುತ್ತವೆ. ಉತ್ತಮ ಪುಸ್ತಕಗಳಿಂದ ಬದುಕಿಗೆ ಬೆಳಕು, ಸಮಾಧಾನ, ಸಂತೋಷ ದೊರೆಯುತ್ತದೆ. ಸಮಸ್ಯೆಗಳಿಗೆ ಪರಿಹಾರ, ನೊಂದ ಮನಸ್ಸಿಗೆ ಸಾಂತ್ವನ ನೀಡುತ್ತವೆ. ಗಾಂಧೀಜಿ, ಕಲಾಂ, ಅಂಬೇಡ್ಕರ್ ಮುಂತಾದ ಮಹಾನ್ ವ್ಯಕ್ತಿಗಳ ಅಧ್ಯಯನದಿಂದ ಪುಸ್ತಕಗಳು ಪರಿಣಾಮ ಬೀರಿದ ಬಗ್ಗೆ ಹಾಗೂ ಬೇರೆ ದೇಶಗಳ ಪುಸ್ತಕಗಳಿಗೆ ಮಹತ್ವ ನೀಡುವ ಬಗ್ಗೆ ಮನೋಜ್ಞವಾಗಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಗದಗ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎ. ಬಳಿಗೇರ ವಿಶ್ವ ಪುಸ್ತಕ ದಿನದ ಮಹತ್ವವನ್ನು ತಿಳಿಸಿ, ಪುಸ್ತಕಗಳಿಗೆ ಎಂದೂ ಸಾವಿಲ್ಲ ಎಂದರು.
ಪಾರ್ವತಿ ಬಳಿಗೇರ ಶಿರಹಟ್ಟಿ ಹಾಗೂ ವಿರೇಶ ಬಾದಾಮಿ ಬೆಂಗಳೂರು ಉಪಸ್ಥಿತರಿದ್ದರು. ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನಡೆಸಿದರು. ಧರ್ಮಗ್ರಂಥ ಪಠಣವನ್ನು ಶಿವನಾಗರಾಜ್ ಎ.ಆಸಂಗಿ, ವಚನಚಿಂತನವನ್ನು ಶಿವಾನಿ ಎ.ಆಸಂಗಿ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಪ್ರಭು ಮೆಡಿಕಲ್ಸ್ ಮಲ್ಲಪ್ಪ ದ್ಯಾಮಪ್ಪ ಕಾಬಳ್ಳಿ ವಹಿಸಿಕೊಂಡಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ್ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ ಉಪಸ್ಥಿತರಿದ್ದರು. ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಸಮ್ಮುಖ ವಹಿಸಿಕೊಂಡ ಪರಮ ಪೂಜ್ಯ ಶ್ರೀ ಚಂದ್ರಶೇಖರ ದೇವರು ಮಾತನಾಡಿ, ಪುಸ್ತಕಗಳು ಜ್ಞಾನದ ಕೊಡಗಳು. ಕೊಡದಲ್ಲಿ ನೀರು ತುಂಬಿಕೊಂಡಂತೆ, ಪುಸ್ತಕಗಳ ಜ್ಞಾನವನ್ನು ಮನದಲ್ಲಿ ತುಂಬಿಕೊಂಡಾಗ ಬದುಕು, ಪಾವನವಾಗುತ್ತದೆ ಎಂದು ಆಶೀರ್ವಚನ ನೀಡಿದರು.