ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇಂದಿನ ಒತ್ತಡದ ಜೀವನದಿಂದ ಪಾರಾಗಲು, ತನ್ನನ್ನು ತಾನು ಅರಿತುಕೊಳ್ಳಲು ಆಧ್ಯಾತ್ಮ ಅತ್ಯವಶ್ಯವಾಗಿದೆ. ಇದು ನಿತ್ಯ ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳು ಮುಖ್ಯವಾಗಿ ತಾನು ಯಾರು, ತನ್ನ ಜೀವನದ ಮುಖ್ಯ ಉದ್ದೇಶವೇನು ಎಂಬುದನ್ನು ಅರಿತುಕೊಳ್ಳಬೇಕು. ತನ್ನ ಅದ್ಭುತ ಸಾಮರ್ಥ್ಯದ ಸಂಪೂರ್ಣ ಸದುಪಯೋಗಪಡಿಸಿಕೊಳ್ಳಬೇಕು. ಅದನ್ನೇ ಆಧ್ಯಾತ್ಮ ತಿಳಿಸುತ್ತದೆ ಎಂದು ಸ್ಥಳೀಯ ಬಿ.ಇಡಿ ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಂ. ಅಂಗಡಿ ಅಭಿಪ್ರಾಯಪಟ್ಟರು.
ಅವರು ಶನಿವಾರ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀ ತಾ.ಪಾ.ಮ.ಬ ಮಹಿಳಾ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡ ಎಂ.ಜಿ. ಮಹಾಂತಶೆಟ್ಟರ ಹಾಗೂ ಶ್ರೀಮತಿ ಜಯಲಕ್ಷ್ಮೀ. ಗಡ್ಡದೇವರಮಠ ನೀಡಿದ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಆಧ್ಯಾತ್ಮದಿಂದ ಮನಸ್ಸಿನ ನೆಮ್ಮದಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ ಪಾಶ್ಚಿಮಾತ್ಯದ ಆಕರ್ಷಣೆಗೊಳಗಾಗಿ ನಮ್ಮ ಆಚರಣೆ, ಸಂಪ್ರದಾಯ, ಸಂಸ್ಕೃತಿಗಳಿಂದ ದೂರವಾಗುತ್ತಿದ್ದೇವೆ. ನಮ್ಮ ಸಂಸ್ಕೃತಿ, ಸಂಪ್ರದಾಯಗಳು ನಮ್ಮ ಹೆಮ್ಮೆ. ಅವುಗಳನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಹಾಯವಾಗುತ್ತದೆ ಎಂದು ಹೇಳಿದರು.
ಅಂಚೆ ಸಹಾಯಕ ಹಾಗೂ ಸಾಹಿತಿ ಸುರೇಶ ತಂಗೋಡ ಮಾತನಾಡಿ, ನಿಸ್ವಾರ್ಥ ಸೇವೆಯ ಬಗ್ಗೆ ನಾವು ಕೇವಲ ದೊಡ್ಡವರ ದೊಡ್ಡ ಉದಾಹರಣೆಗಳನ್ನು ನೀಡುವುದಲ್ಲ. ಬದಲಾಗಿ ನಮ್ಮ ನಿತ್ಯ ಜೀವನದ ಸಣ್ಣ ಸಣ್ಣ ಹೆಜ್ಜೆಗಳಲ್ಲೂ ನಿಸ್ವಾರ್ಥತೆಯನ್ನು ಕಂಡುಕೊಳ್ಳಬಹುದು. ಆ ಮೂಲಕ ಸಮಾಜದ ಶ್ರೇಯಸ್ಸನ್ನು ಸಾಧಿಸಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ.ಸಾ.ಪ ತಾಲೂಕಾಧ್ಯಕ್ಷ ಈಶ್ವರ ಮೆಡ್ಲೇರಿ, ದತ್ತಿ ದಾನಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜೀವನಾಡಿಯಿದ್ದಂತೆ. ಇಂತಹ ದತ್ತಿ ಉಪನ್ಯಾಸಗಳ ಮೂಲಕ ಇಂದು ಸಾಹಿತ್ಯ ಪರಿಷತ್ತು ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಶ್ರೀ ತಾ.ಪಾ.ಮ.ಬ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ನಿರೂಪಿಸಿದರು. ಪದಾಧಿಕಾರಿ ತಮ್ಮನಗೌಡ ಪಾಟೀಲ ವಂದಿಸಿದರು. ವಿಶ್ರಾಂತ ಶಿಕ್ಷಕ ವಿ.ಎಂ. ಹೂಗಾರ ಗೀತ ಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರವಿಕುಮಾರ ನೀರಲಗಿ, ಸುಧಾ ಉಕ್ಕಲಿ, ಮಾಲಾಶ್ರೀ ಹುಳ್ಳಿಕೊಪ್ಪಿ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯ ವಿಜಯಕುಮಾರ ಬಿಳೆಯಲಿ ಮಾತನಾಡಿ, ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡದ ಜಾಗೃತಿ ನಿತ್ಯ ನಿರಂತರವಾಗಿ ಸಾಗಿದೆ. ಅದರಲ್ಲೂ ಶಾಲಾ-ಕಾಲೇಜುಗಳಲ್ಲಿ ಕ.ಸಾ.ಪ ಘಟಕ ಸ್ಥಾಪಿಸಿ ಯುವ ಮನಗಳಲ್ಲಿ ಕನ್ನಡತನದ ಅಭಿಮಾನ ಮೂಡಿಸುತ್ತಿರುವದು ಶ್ಲಾಘನೀಯ ಹಾಗೂ ಮಾದರಿ ಕಾರ್ಯ ಎಂದು ಅಭಿಪ್ರಾಯಪಟ್ಟರು.