ವಿಜಯಸಾಕ್ಷಿ ಸುದ್ದಿ, ಗದಗ: ಸಮೀಪದ ಹರ್ಲಾಪೂರ ರೈಲ್ವೆ ನಿಲ್ದಾಣದಲ್ಲಿ ಕುಷ್ಟಗಿಯಿಂದ ಹುಬ್ಬಳ್ಳಿವರೆಗೆ ಸಂಚರಿಸುವ ದೈನಂದಿನ ಎಕ್ಸ್ಪ್ರೆಸ್ ರೈಲು ಗಾಡಿಗೆ (17328) ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಿ.ಆರ್. ನಾರಾಯಣ ರೆಡ್ಡಿ ಬಣದ ವತಿಯಿಂದ ಪೂಜೆ ಸಲ್ಲಿಸಿ, ರೈತ ಸಂಘದ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್.ಬಾಬರಿ, ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಹುಚ್ಚೀರಪ್ಪ ಜೋಗಿನ ಮತ್ತು ಸದಸ್ಯರು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಕೂಳೂರು ಮಾತನಾಡಿ, ಈ ರೈಲ್ವೆ ಗಾಡಿ ನಿಲುಗಡೆಯಿಂದ ಬೆಳಿಗ್ಗೆ ಹುಬ್ಬಳ್ಳಿ-ಧಾರವಾಡ ನಗರಗಳಿಗೆ ತೆರಳುವ ತಿಮ್ಮಾಪೂರ, ಹರ್ಲಾಪೂರ, ಲಕ್ಕುಂಡಿ, ಯರೆಹಂಚಿನಾಳ, ಬಿನ್ನಾಳ ಗ್ರಾಮದ ಸಾರ್ವಜನಿಕರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು, ಕೂಲಿ ಕಾರ್ಮಿಕರು ಹಾಗೂ ನೌಕರರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಯಲ್ಲಪ್ಪ ಎಚ್.ಬಾಬರಿ ಮಾತನಾಡಿ, ಈ ರೈಲು ಗಾಡಿ ನಿಲುಗಡೆಗೆ ಸಹಕರಿಸಿದ ಸಚಿವರಾದ ವಿ. ಸೋಮಣ್ಣ ಹಾಗೂ ರೈಲ್ವೆ ಹಿರಿಯ ಅಧಿಕಾರಿಗಳಿಗೆ ರೈತ ಸಂಘದಿಂದ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಹಾವೇರಿ-ಗದಗ ಸಂಸದರಾದ ಬಸವರಾಜ ಬೊಮ್ಮಾಯಿ ಅವರು ಮುಂದಿನ ದಿನಮಾನಗಳಲ್ಲಿ ಹಂಪಿ ಎಕ್ಸ್ಪ್ರೆಸ್ ಹಾಗೂ ತಿರುಪತಿ ಎಕ್ಸ್ಪ್ರೆಸ್ ರೈಲುಗಾಡಿಗಳನ್ನು ಹರ್ಲಾಪೂರ ರೈಲ್ವೆ ಸ್ಟೇಷನ್ನಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ಗ್ರಾಮ ಘಟಕದ ಸದಸ್ಯರಾದ ಮಲ್ಲಿಕಾರ್ಜುನ ಇದ್ಲಿ, ಶರಣಪ್ಪ ಜೋಗಿನ, ಬಾಳಪ್ಪ ಗಂಗರಾತ್ರಿ, ಮಲ್ಲಪ್ಪ ಮಾಳಗುಡರ, ಹನುಮಪ್ಪ ಪೂಜಾರ, ಸುರೇಶ್ ಬಿಸನಳ್ಳಿ, ಈರಪ್ಪ ಲಕ್ಕುಂಡಿ, ಬಸಪ್ಪ ಗುಡ್ಲಾನೂರ, ಮಾರುತಿ ಕಣ್ಣೂರು, ಕೆ.ಜಿ. ಕಟ್ಟಿಮನಿ, ಅಶೋಕ ಗದಗ, ರೈಲ್ವೇ ಸ್ಟೇಷನ್ ಮಾಸ್ಟರ್ ರವಿಂದ್ರ ಪ್ರಸಾದ, ಸಿಬ್ಬಂದಿ ಹನುಮಂತ ಜೋಗಿನ ಮಂಜುನಾಥ ದಳವಾಯಿ ಮುಂತಾದವರಿದ್ದರು.