ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ಸಾಹಿತ್ಯ ಲೋಕಕ್ಕೆ ಗದಗ ಜಿಲ್ಲೆಯು ಅಪಾರ ಕೊಡುಗೆಯನ್ನು ನೀದಿದೆ. ಅಂತಹ ಭವ್ಯ ಪರಂರೆಯ ಇತಿಹಾಸವನ್ನು ಅವಲೋಕನ ಮಾಡಿ ಅದನ್ನು ಇನ್ನಷ್ಟು ಪ್ರಸಾರ ಮಾಡುವ ಕಾರ್ಯವು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ಗದಗ ಜಿಲ್ಲೆಯಲ್ಲಿ ನಿರಂತರ ನಡೆಯುವಂತಾಗಲಿ ಎಂದು ಸಾಹಿತಿ, ಉಪನ್ಯಾಸಕಿ ಸುಧಾ ಹುಚ್ಚಣ್ಣವರ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ ಗದಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆಯ ಪ್ರಾಚೀನ ಕವಿಗಳಾದ ನಯಸೇನ, ಜಾಮರಸ, ದುರ್ಗಸಿಂಹ, ಕುಮಾರವ್ಯಾಸ ಮೊದಲಾದವರ ಕೃತಿಗಳ ಓದು ಕಾರ್ಯಕ್ರಮಗಳು ನಡೆಯಲಿ ಎಂದು ಹೇಳಿದರು.
ನಯಸೇನನ ಧರ್ಮಾಮೃತ ಕುರಿತು ವಿಶೇಷ ಉಪನ್ಯಾಸ ನೀಡಿಡ ಡಾ. ಅಂದಯ್ಯ ಅರವಟಗಿಮಠ, 11ನೇ ಶತಮಾನದ ಪೂರ್ವಾರ್ಧದಲ್ಲಿ ಧರ್ಮಾಮೃತ ಎಂಬ ಚಂಪೂ ಕೃತಿ ರಚನೆ ಮಾಡಿದ ಮುಳುಗುಂದದ ನಯಸೇನ ಒಬ್ಬ ದಿಗಂಬರ ಜೈನ ಸನ್ಯಾಸಿ. ಆ ಕಾಲದಲ್ಲಿಯ ಜೈನ ಧರ್ಮದ ತತ್ವ-ಸಿದ್ಧಾಂತಗಳ ಪ್ರಸಾರಕ್ಕಾಗಿ ಅವಿರತ ಪ್ರಯತ್ನ ಮಾಡಿದನು. ಅಲ್ಲದೆ ಇದುವರೆಗಿನ ಕಾವ್ಯ ಮಾರ್ಗವನ್ನು ಬದಲಿಸಿ ಜನಸಾಮಾನ್ಯರನ್ನು ಒಳಗೊಳ್ಳುವಂತೆ ಕಾವ್ಯ ಬರೆದಿರುವುದು ಅತ್ಯಂತ ಮಹತ್ವದ್ದು.
ಇದು ಒಟ್ಟು ಹದಿನಾಲ್ಕು ಕತೆಗಳ ಸಂಗ್ರಹ. ಜೈನ ಧರ್ಮ ಇಳಿಮುಖವಾಗುತ್ತಿರುವ ಅಂದಿನ ಕಾಲದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಕಾವ್ಯ ಬರೆದ ಜನಪದ ಕವಿ ನಯಸೇನ ಎಂಬುದು ಗಮನಾರ್ಹ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯದ ಪ್ರಕಾರಗಳನ್ನು, ಕವಿಗಳನ್ನು ಪರಿಚಯಿಸುವ ಕಾರ್ಯವನ್ನು ಚಕೋರ ವೇದಿಕೆಯು ಮಾಡಲಿ ಎಂದು ಆಶಿಸಿದರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ಗುರಿ ಉದ್ದೇಶಗಳ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ. ಅರ್ಜುನ ಗೊಳಸಂಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಜಿ.ಬಿ. ಪಾಟೀಲ ಭಾಗವಹಿಸಿದ್ದರು. ಶಿಲ್ಪಾ ಮ್ಯಾಗೇರಿ ಸ್ವಾಗತಿಸಿದರು. ಚಕೋರ ವೇದಿಕೆಯ ಸಂಚಾಲಕರಾದ ಎಸ್.ಯು. ಸಜ್ಜನಶೆಟ್ಟರ ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾ ಕಸಾಪ ಕಾರ್ಯದರ್ಶಿ ಬಾಪುರೆ ವಂದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ತುಮಕೂರಿನ ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿಗಳೆಲ್ಲ ನಮ್ಮ ಹೆಮ್ಮೆಯ ಅಭಿಮಾನದ ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವನ್ನು ಮಾಡಬೇಕಾದ ಅಗತ್ಯವಿದೆ ಎಂದರು.