ವಿಜಯಸಾಕ್ಷಿ ಸುದ್ದಿ, ಗದಗ: ಬಾಬಾಸಾಹೇಬ ಅಂಬೇಡ್ಕರ್ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಹೋರಾಟದ ಫಲವಾಗಿ ನಮ್ಮ ದೇಶದಲ್ಲಿ ಸರ್ಕಾರದ ಯೋಜನೆಗಳನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತಿದೆ. ಶ್ರೀಮಂತರು ಹಾಗೂ ಬಡವರ ನಡುವೆ ಇರುವ ಅಂತರವನ್ನು ಶಮನಗೊಳಿಸುವ ಐತಿಹಾಸಿಕ ಹೋರಾಟದಿಂದ ಇಂದು ಎಲ್ಲರೂ ಜಾತಿ, ಧರ್ಮಗಳನ್ನು ಮೀರಿ ಒಂದಾಗಿ ಬದುಕು ನಡೆಸುತ್ತಿರುವುದು ನಮ್ಮ ದೇಶದ ಸಂವಿಧಾನದಿಂದ ಸಾಧ್ಯವಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ನಾವು ಎಲ್ಲರೂ ಸೇರಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಒಗ್ಗೂಡಲು ಸ್ಲಂ ಜನರ ಸಮಾವೇಶ ಹಮ್ಮಿಕೊಂಡಿದ್ದು, ಎಲ್ಲರೂ ಭಾಗವಹಿಸಬೇಕೆಂದು ಗದಗ ಜಿಲ್ಲಾ ಸ್ಲಂ ಸಮಿತಿ ಉಪಾಧ್ಯಕ್ಷ ಅಶೋಕ ಕುಡತಿನ್ನಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ, ಮೇ 28ರಂದು ನಗರದಲ್ಲಿ ಹಮ್ಮಿಕೊಂಡಿರುವ ಸ್ಲಂ ಜನರ ಸಮಾವೇಶ ಹಾಗೂ ಸ್ಲಂ ಹಬ್ಬ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರತಿಯೊಬ್ಬ ನಾಗರೀಕರು ಸಮಾನವಾಗಿ ಹಕ್ಕು ಪಡೆಯುವಂತೆ ನಮ್ಮ ಸಂವಿಧಾನ ಖಾತ್ರಿಪಡಿಸಿದೆ. ಇದನ್ನು ನಮ್ಮ ಸ್ಲಂಗಳಲ್ಲಿರುವ ಜನರು ತಿಳಿದುಕೊಂಡು ಜಾತಿ, ಧರ್ಮ ಮಾಡದೇ ಒಗ್ಗೂಡಿ ಹೋರಾಟಗಳನ್ನು ಮಾಡಿದರೆ ಮಾತ್ರ ನಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಸಾವಿತ್ರಿಬಾ ಫುಲೆ ಮಹಿಳಾ ಸಮಿತಿ ಹುಬ್ಬಳ್ಳಿ ಘಟಕದ ಸಂಚಾಲಕಿ ಶೋಭಾ ಕಮತರ, ಸ್ಲಂ ಸಮಿತಿ ಕಾರ್ಯದರ್ಶಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಇಬ್ರಾಹಿಂ ಮುಲ್ಲಾ, ಶರಣಪ್ಪ ಸೂಡಿ, ಮೆಹರುನಿಸಾ ಡಂಬಳ, ಮುನ್ನಾ ಅಗಡಿ, ಪುಷ್ಪಾ ಬಿಜಾಪೂರ, ಮಕ್ತುಮಸಾಬ ಮುಲ್ಲಾನವರ, ಮಹಮ್ಮದಸಾಬ ಗಡಾದ, ಮೌಲಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ರೇಷ್ಮಾ ಢಾಲಾಯತ, ಸಾಕ್ರುಬಾಯಿ ಗೋಸಾವಿ ಹಾಗೂ ನೂರಾರು ಸ್ಲಂ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಸ್ಲಂ ಜನರ ಸಮಾವೇಶದ ಜೊತೆಗೆ ವಿಭಾಗ ಮಟ್ಟದ ಸ್ಲಂ ಹಬ್ಬ ಕಾರ್ಯಕ್ರಮವನ್ನು ನಡೆಸಲಾಗುತ್ತಿದ್ದು, ನಮ್ಮ ಕೊಳಗೇರಿಗಳಲ್ಲಿ ಇರುವ ಕಲಾವಿದರನ್ನು ಮತ್ತು ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಸುವ ಕೆಲಸವನ್ನು ಈ ಸಮಾವೇಶದ ಮೂಲಕ ಮಾಡಲಾಗುತ್ತಿದೆ. ನಮ್ಮ ಸ್ಲಂ ಪ್ರದೇಶಗಳಲ್ಲಿರುವ ಕಲಾವಿದರು ಇದರ ಸದಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.



