ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡದ ಶ್ರೇಷ್ಠ ಲೇಖಕಿ ಮತ್ತು ಕಥೆಗಾರ್ತಿ ಬಾನು ಮುಷ್ತಾಕ ಅವರ ‘ಹೃದಯ ಹಣತೆ’ (ಹಾರ್ಟ್ ಲ್ಯಾಂಪ್) ಕಥಾಸಂಕಲನಕ್ಕೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿರುವುದು ಸಮಸ್ತ ಕನ್ನಡಿಗರೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಜಾಗತಿಕ ಮಟ್ಟದಲ್ಲಿ ಕನ್ನಡದ ಘನತೆ ಹಾಗೂ ಗೌರವಗಳನ್ನು ಹೆಚ್ಚಿಸಿದ ಅವರು ನಿಜಕ್ಕೂ ಅಭಿನಂದನಾರ್ಹರು ಎಂದು ಡಂಬಳ-ಗದಗ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಥೆಗಾರ್ತಿ ಬಾನು ಮುಷ್ತಾಕ ಅವರಿಗೆ ಶುಭಾಶಯ ಕೋರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಶ್ರೀಗಳು, ಲೇಖಕಿ ಬಾನು ಮುಷ್ತಾಕ ಅವರು ನಮ್ಮ ನಾಡಿನ ಹೆಸರಾಂತ ಪ್ರಗತಿಪರ ಚಿಂತಕಿಯಾಗಿದ್ದಾರೆ. ಪ್ರಸಿದ್ಧ ವಾರಪತ್ರಿಕೆಯ ವರದಿಗಾರ್ತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ನ್ಯಾಯವಾದಿಯಾಗಿಯೂ ಕಾರ್ಯನಿರ್ವಹಿಸಿದ ಅವರು, ಹತ್ತು ಹಲವು ಮೌಲಿಕ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆಯನ್ನು ನೀಡಿದ್ದಾರೆ. ಈ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಯು ಕನ್ನಡದ ಕೃತಿಗೆ ಸಂದ ಮೊದಲ ಪ್ರಶಸ್ತಿಯಾಗಿರುವುದರಿಂದ ಕನ್ನಡಿಗರಲ್ಲಿ ವಿಶೇಷ ಸಂಭ್ರಮ ಉಂಟಾಗಿದೆ. ಕರ್ನಾಟಕಕ್ಕೆ ಈ ಗೌರವ ತಂದುಕೊಟ್ಟ ಕನ್ನಡತಿ ಬಾನು ಮುಷ್ತಾಕ ಹಾಗೂ ಕೃತಿಯನ್ನು ಇಂಗ್ಲೀಷಿಗೆ ಅನುವಾದಿಸಿದ ದೀಪಾ ಭಾಸ್ತಿ ಅವರನ್ನು ಶ್ರೀಗಳು ಅಭಿನಂದಿಸಿದ್ದಾರೆ.