ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಹಲವು ವರ್ಷಗಳ ಸತತಾಭ್ಯಾಸ, ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ, ಶೃದ್ಧೆಯ ಫಲವಾಗಿ ಪಡೆದ ಇಂಜಿನಿಯರಿಂಗ್ ಪದವಿ ಉಜ್ವಲ ಭವಿಷ್ಯದ ಮೈಲಿಗಲ್ಲಾಗಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೀವು ಕೈಗೊಳ್ಳುವ ಅಚಲ ನಿರ್ಧಾರ ಮುಖ್ಯವಾಗುತ್ತದೆ ಎಂದು ಗದಗ ಮಹಾತ್ಮ ಗಾಂಧಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸುರೇಶ ನಾಡಗೌಡರ ಹೇಳಿದರು.
ಅವರು ಶನಿವಾರ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ.ಅಗಡಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಪ್ರಸಕ್ತ ಸಾಲಿನಲ್ಲಿ ತಾಂತ್ರಿಕ ಶಿಕ್ಷಣದ ವಿವಿಧ ವಿಭಾಗಗಳಲ್ಲಿ ಪದವಿ ಪೂರೈಸಿದ 340 ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ತಾಂತ್ರಿಕ ಮತ್ತು ಔದ್ಯೋಗಿಕ ಯುಗದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದರೂ ಸ್ಪರ್ಧಾತ್ಮಕ ಮನೋಭಾವ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನದ ನಂತರ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ನಿಮ್ಮ ಸುಂದರ ಭವಿಷ್ಯಕ್ಕಾಗಿ ಪಾಲಕರು ಹತ್ತಾರು ಆಸೆ-ಕನಸು ಹೊತ್ತು ತಮ್ಮನ್ನೇ ಸಮರ್ಪಿಸಿಕೊಂಡಿರುತ್ತಾರೆ. ಜೀವನದಲ್ಲಿ ಕೀಳರಿಮೆ ಬಿಟ್ಟು ದೃಡ ನಿರ್ಧಾರ, ಪ್ರಯತ್ನ, ಶಿಸ್ತು ರೂಢಿಸಿಕೊಳ್ಳಿ. ಕಲಿತ ಶಾಲೆ-ಕಾಲೇಜು, ಶಿಕ್ಷಕರು, ಪಾಲಕರ ಬಗ್ಗೆ ಸದಾ ಪ್ರೀತಿ, ಗೌರವವಿರಲಿ. ವಿದೇಶಕ್ಕೆ ಹೋದವರು ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳದಿರಿ. ಪಾಲಕರ ನಿರ್ಲಕ್ಷ್ಯ ಈಗ ಕಾನೂನು ಚೌಕಟ್ಟಿನಲ್ಲಿ ಅಪರಾಧವಾಗುತ್ತದೆ ಎಂದರು.
ವೇದಿಕೆ ಮೇಲೆ ಡಾ. ಎನ್. ಹಯವದನ, ಡಾ. ಸುಭಾಸ ಮೇಟಿ, ಪ್ರೊ. ವಿಕ್ರಂ ಶಿರೋಳ, ಪ್ರೊ. ಸ್ವಪ್ನ ಚನ್ನಗೌಡರ, ಡಾ. ಅರುಣ ಕುಂಬಿ, ಡಾ. ಆರ್.ಎಂ. ಪಾಟೀಲ, ಡಾ. ಸಂತೋಷ ಬುಜರಿ, ಡಾ. ರಾಜಶೇಖರ ಕುಣಬೇವು, ಡಾ. ಶ್ರೀನಿವಾಸ್ ಆರ್, ಡಾ. ಗಿರೀಶ ಯತ್ನಳ್ಳಿ, ರವಿ ಚೌವ್ಹಾಣ, ಮುಕುಂದ ಡಿ, ಪ್ರೊ. ಸೋಮಶೇಖರ ಕೆರಿಮನಿ, ಪ್ರೊ. ಎಸ್.ಎಫ್. ಕೊಡ್ಲಿ, ಪ್ರೊ. ಅರುಣಕುಮಾರ ಸೇರಿ ವಿವಿಧ ವಿಭಾಗಗಳ ಉಪನ್ಯಾಸಕರು, ಪಾಲಕರು ಇದ್ದರು. ಪ್ರೊ. ಬಸವರಾಜ ಸೊರಟೂರ, ವಿದ್ಯಾರ್ಥಿಗಳಾದ ಅಪೂರ್ವ, ಸೃಷ್ಟಿ ನಿರೂಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ ಮಾತನಾಡಿ, ಯುವ ಇಂಜೀಯರ್ಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನ ಕಂಡುಹಿಡಿದು ದೇಶದ ಅಭಿವೃದ್ಧಿಗೆ ಶ್ರೇಷ್ಠ ಕೊಡುಗೆ ಸಲ್ಲಿಸಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು. ದಿ.ವೆಂಕಪ್ಪ ಅಗಡಿಯವರು ಗ್ರಾಮೀಣ ಭಾಗದ ಬಡ, ರೈತರ ಮಕ್ಕಳು ಇಂಜಿನಿಯರಿಂಗ್ ಶಿಕ್ಷಣ ಹೊಂದಬೇಕು ಎಂಬ ಸದುದ್ದೇಶದಿಂದ ಸ್ಥಾಪಿಸಿದ ಅಗಡಿ ಸಂಸ್ಥೆಯು 2 ದಶಕಗಳಿಂದ ಶಿಕ್ಷಣ ರಂಗದಲ್ಲಿ ಅಮೂಲ್ಯವಾದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.