ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರದಿಂದ ಮುಷ್ಕರ ಆರಂಭಿಸಿರುವ ಇಲ್ಲಿನ ಪುರಸಭೆ ಪೌರ ನೌಕರರ, ಪೌರ ಕಾರ್ಮಿಕರ ಪ್ರತಿಭಟನೆ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಪೌರ ಕಾರ್ಮಿಕರು ತಮಟೆ ಬಾರಿಸುವ ಮೂಲಕ ಪ್ರತಿಭಟನೆ ನಡೆಸಿದ್ದು ವಿಶೇಷವಾಗಿತ್ತು.
ಕಳೆದ ಮೂರು ದಿನಗಳಿಂದ ಪೌರ ಕಾರ್ಮಿಕರು ಸ್ವಚ್ಛತೆ ಕೆಲಸಕ್ಕ ಬಂದಿಲ್ಲ. ಹಾಗಾಗಿ ಊರ ತುಂಬ ಕಸದ ರಾಶಿಗಳು ಕಾಣುತ್ತಿವೆ. ಪೌರ ನೌಕರರ ಸಂಘದ ಅಧ್ಯಕ್ಷ ಬಸವಣ್ಣೆಪ್ಪ ನಂದೆಣ್ಣವರ, ಸದಸ್ಯ ಹನಮಂತಪ್ಪ ನಂದೆಣ್ಣವರ ಮಾತನಾಡಿ, ಮೂರು ದಿನಗಳಿಂದ ನಡೆದಿರುವ ಮುಷ್ಕರದಿಂದಾಗಿ ಊರಿನ ಸ್ವಚ್ಛತೆಗೆ ಕಾರ್ಮಿಕರು ಬಂದಿಲ್ಲ. ಕಾರಣ ಇನ್ನೆರಡು ದಿನ ಹೀಗೆಯೇ ಬಿಟ್ಟರೆ ಊರೆಲ್ಲ ಗಬ್ಬು ವಾಸನೆ ಬರುತ್ತದೆ. ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಉಪಾಧ್ಯಕ್ಷ ಪೀರದೋಷ ಆಡೂರ ಭೇಟಿ ನೀಡಿ ಮಾತನಾಡಿದರು. ಮುಖ್ಯಾಧಿಕಾರಿ ಮಹೇಶ ಹಡಪದ, ಮಂಜುಳಾ ಹೂಗಾರ, ಮಂಜುನಾಥ ಮುದಗಲ್ಲ ಸೇರಿದಂತೆ ಮತ್ತಿತರರು ಇದ್ದರು.