ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕರು, ಶೋಷಿತರ ಧ್ವನಿಯಾಗಿರುವ ಪ್ರೊ. ಬಿ. ಕೃಷ್ಣಪ್ಪನವರು ಅಂಬೇಡ್ಕರವರ ವಿಚಾರಗಳನ್ನು, ತತ್ವ-ಸಿದ್ಧಾಂತಗಳನ್ನು ಸಂವಿಧಾನ ಬದ್ಧವಾಗಿ ಇರುವ ಹಕ್ಕುಗಳ ಬಗ್ಗೆ ಮನೆ ಮನಗಳಿಗೆ ತಲುಪಿಸುವ ಹಾಗೂ ದಲಿತರ ಸ್ವಾಭಿಮಾನದ ಬದುಕಿಗಾಗಿ ಜೀವನವನ್ನೇ ತ್ಯಾಗ ಮಾಡಿದ ಧೀಮಂತ ನಾಯಕರಾಗಿದ್ದಾರೆ. ಅವರ ನೆನಪಿಗಾಗಿ ಗದಗ ನಗರದಲ್ಲಿ ಪ್ರೊ. ಬಿ. ಕೃಷ್ಣಪ್ಪ ಸ್ಮಾರಕ ಭವನ ನಿರ್ಮಾಣ ಹಾಗೂ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದರೊಂದಿಗೆ ಅವರ ಜನ್ಮದಿನವಾದ ಜೂನ್ 9 ಸರಕಾರಿ ರಜೆ ರಹಿತ ಜಯಂತಿ ಕಾರ್ಯಕ್ರಮವನ್ನಾಗಿ ಆಚರಿಸಬೇಕೆಂದು ಗದಗ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗದಗ ಜಿಲ್ಲಾ ಶಾಖೆ ವತಿಯಿಂದ ಮನವಿ ಸಲ್ಲಿಸಿದರು.
ನ್ಯಾಯಾಮೂರ್ತಿ ನಾಗಮೋಹನದಾಸ್ ಅವರಿಂದ ಆಯೋಗದ ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಜಾತಿಸಮೀಕ್ಷೆ ಕಾರ್ಯ ಕೂಡಲೇ ಮುಕ್ತಾಯಗೊಳಿಸಿ ಜನಸಂಖ್ಯೆಗೆ ಅನುಗುಣವಾಗಿ ವೈಜ್ಞಾನಿಕವಾಗಿ ಮೀಸಲಾತಿ ವರ್ಗಿಕರಣ ಮಾಡಲು ಕ್ರಮ ಕೈಗೊಳ್ಳಲು ಜಿಲ್ಲಾ ಸಂಚಾಲಕ ದುರಗಪ್ಪ ಎಲ್.ಹರಿಜನ, ರಾಜ್ಯ ಸಂಘಟನಾ ಸಂಚಾಲಕ ಎಸ್.ಎನ್. ಬಳ್ಳಾರಿ, ರಾಜ್ಯ ವಿಭಾಗೀಯ ಸಂಚಾಲಕ ಪ್ರಕಾಶ ಹೊಸಳ್ಳಿ, ಜಿಲ್ಲಾ ಸಂಘಟನಾ ಸಂಚಾಲಕ ಹನುಮಂತ ಪೂಜಾರ, ಪ್ರಮುಖರಾದ ಸೋಮಪ್ಪ ಹೈತಾಪೂರ, ಸೋಮಶೇಖರ ನಾಗರಾಜ, ಕೃಷ್ಣ ಪೂಜಾರ, ಮಧು ಬಳ್ಳಾರಿ, ಹರೀಶ ಬಾವಿಮನಿ ಮುಂತಾದವರು ಮನವಿ ಅರ್ಪಿಸಿ ಒತ್ತಾಯಿಸಿದರು ಎಂದು ನಾಗರಾಜ ಗುತ್ತಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.