ನಾಲ್ವಡಿ ಕೃಷ್ಣರಾಜರು ಅಪರೂಪದ ಒಡೆಯ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕನ್ನಡ ನಾಡಿನ ಸಾಹಿತ್ಯ, ಕೃಷಿ, ನೀರಾವರಿ, ಕೈಗಾರಿಕೆ, ವಿದ್ಯುತ್, ಶಿಕ್ಷಣ ಆರೋಗ್ಯ ಮುಂತಾದ ಕ್ಷೇತ್ರಗಳಿಗೆ ಜನರು ಯಾವತ್ತೂ ಮರೆಯಲಾರದ ಕೊಡುಗೆಗಳನ್ನು ನೀಡಿ ಮೈಸೂರಿನತ್ತ ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗೇರ ನುಡಿದರು.

Advertisement

ಶಿರಹಟ್ಟಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ‍್ಯ ಬರುವುದಕ್ಕಿಂತ ಮುಂಚಿತವಾಗಿಯೇ ಮಹಾತ್ಮ ಬಸವಣ್ಣವರ ಕಲ್ಪನೆಯ ಪ್ರಜಾಪ್ರಭುತ್ವ ಸರ್ಕಾರದ ಮಾದರಿಯನ್ನು ಜನತೆಗೆ ನೀಡಿ ರಾಜ್ಯವನ್ನು ಸರ್ವ ವಿಧದಿಂದಲೂ ಅಭಿವೃದ್ಧಿಗೊಳಿಸಿದ ಪುಣ್ಯಾತ್ಮರವರು. ಇವರ ಜನಪರ ಕೆಲಸ ಕಾರ್ಯಗಳನ್ನು ನೋಡಿ ಸ್ವತಃ ಮಹಾತ್ಮ ಗಾಂಧೀಜಿಯವರೇ ಇವರನ್ನು ಮೈಸೂರಿನ ರಾಜರ್ಷಿಯೆಂದು ಕರೆದಿದ್ದರು ಎಂದರು.

ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ. ಲಮಾಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಓರ್ವ ರಾಜನಾದವನು ಹೇಗಿರಬೇಕೆಂದು ಉದಾಹರಣೆಯಾಗಿ ಬದುಕಿದವರು ನಾಲ್ವಡಿ ಕೃಷ್ಣರಾಜ ಒಡೆಯರು. ತಮ್ಮ ಆಡಳಿತದ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಘಟನೆಯನ್ನು ಹುಟ್ಟುಹಾಕಿ ತಮ್ಮ ಕನ್ನಡ ಅಭಿಮಾನವನ್ನು ಅಭಿವ್ಯಕ್ತಪಡಿಸಿದ್ದಾರೆ ಎಂದರು.

ಶಿಕ್ಷಕ ಶರೀಫ್ ಶಿರಹಟ್ಟಿ ಸ್ವಾಗತಿಸಿದರು. ವೇದಿಕೆ ಮೇಲೆ ಮುಖ್ಯ ಶಿಕ್ಷಕರಾದ ಪಿ.ಎಫ್. ಬಂತಿ ಉಪಸ್ಥಿತರಿದ್ದರು. ಕಾಶಪ್ಪ ಸ್ವಾಮಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here