ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಯಾವುದೇ ಸಮುದಾಯವಾಗಿರಲಿ, ಹಬ್ಬದ ಆಚರಣೆಯ ವೇಳೆ ಅನ್ಯ ಧರ್ಮದ ಬಗ್ಗೆ ತಾತ್ಸಾರ ಮಾಡದೆ ಶಾಂತಿಯುತವಾಗಿ ಹಬ್ಬಗಳನ್ನು ಆಚರಿಸಿದಾಗ ಮಾತ್ರ ಸೌಹಾರ್ದತೆ ಮೂಡಲು ಸಾಧ್ಯವಾಗುತ್ತದೆ. ಪಟ್ಟಣದಲ್ಲಿ ಎಲ್ಲ ಧರ್ಮದವರು ಸಹಬಾಳ್ವೆಯಿಂದ ನಡೆದುಕೊಂಡು ಬರುತ್ತಿದ್ದು, ಅದೇ ಪರಂಪರೆ ಎಲ್ಲ ಹಬ್ಬಗಳಲ್ಲಿ ಇರಲಿ ಎಂದು ಗದಗ ಜಿಲ್ಲಾ ನೂತನ ಡಿವೈಎಸ್ಪಿ ಮುರ್ತೂಜಾ ಖಾದ್ರಿ ಹೇಳಿದರು.
ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಬುಧವಾರ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಹಬ್ಬಗಳ ಮಹತ್ವವನ್ನು ತಿಳಿಸಿಕೊಡುವ ಜೊತೆಗೆ ಶಾಂತಿಗೆ ಯಾವುದೇ ರೀತಿಯ ಭಂಗವಾಗದಂತೆ ನಿಗಾ ವಹಿಸುವದು ಅವಶ್ಯ. ಎಲ್ಲರೂ ಕಾನೂನಿಗೆ ಬದ್ಧರಾಗಿ ನಡೆದುಕೊಳ್ಳಿ, ಕಾನೂನು ಉಲ್ಲಂಘಿಸದಂತೆ ಆಚರಣೆಗಳನ್ನು ಮಾಡಿ. ಶಾಂತಿ ಸೌಹಾರ್ದತೆಯ ಸಂಕೆತವಾಗಿರುವ ಹಬ್ಬಗಳನ್ನು ಅಷ್ಟೇ ಶಾಂತಿಯುತವಾಗಿ ಆಚರಿಸುವದರಿಂದ ಅದರ ಮಹತ್ವ ಎಲ್ಲರಿಗೂ ತಿಳಿಯಲು ಸಾಧ್ಯವಾಗುತ್ತದೆ. ಪ್ರತಿ ಹಬ್ಬಗಳಿಗೆ ಎಲ್ಲ ಸಮಾಜ ಬಾಂಧವರು ಸಹಕಾರ ನೀಡುತ್ತಾ ಬರುತ್ತಿದ್ದು, ಅದರಂತೆ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸಿ ಎಂದು ಹೇಳಿದರು.
ಮುಖಂಡರಾದ ತಿಪ್ಪಣ್ಣ ಸಂಶಿ, ಗಂಗಾಧರ ಮೆಣಸಿನಕಾಯಿ, ಪುರಸಭೆ ಉಪಾಧ್ಯಕ್ಷ ಪೀರದೋಷ ಆಡೂರ, ಮಾಜಿ ಉಪಾಧ್ಯಕ್ಷ ದಾದಾಪೀರ ಮುಚ್ಚಾಲೆ, ಸದಸ್ಯ ಎಸ್.ಕೆ. ಹವಾಲ್ದಾರ ಸೇರಿದಂತೆ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್ಐ ನಾಗರಾಜ ಗಡಾದ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಮಾತನಾಡಿದರು.
ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆ ಅಧ್ಯಕ್ಷ ಎಂ.ಎಂ. ಗದಗ, ಅನಿಲ ಮುಳಗುಂದ, ಸುರೇಶ ನಂದೆಣ್ಣವರ, ಸದಾನಂದ ನಂದೆಣ್ಣವರ, ಬಸವರಾಜ ಹಿರೇಮನಿ, ಫಕ್ಕೀರೇಶ ಅಣ್ಣಿಗೇರಿ, ಚಂದ್ರು ಲಮಾಣಿ, ಎನ್.ಆರ್. ಸಾತಪೂತೆ, ಮುಸ್ತಾಕ್ಅಹ್ಮದ್ ಶಿರಹಟ್ಟಿ, ಅಮಿತ್ ಗುಡಗೇರಿ, ಹನುಮಂತ ಶರಸೂರಿ, ಚಿನ್ನು ಹಳದೋಟದ, ಮುತ್ತಣ್ಣ ಕರ್ಜೆಕಣ್ಣವರ, ಸುರೇಶ ಹಟ್ಟಿ, ಸೇರಿದಂತೆ ಅನೇಕರಿದ್ದು. ಪ್ರಕಾಶ ಮ್ಯಾಗೇರಿ, ಮಾರುತಿ ಲಮಾಣಿ ನಿರೂಪಿಸಿದರು.
ಹಿರಿಯ ಮುಖಂಡ ಪೂರ್ಣಾಜಿ ಖರಾಟೆ ಮಾತನಾಡಿ, ಬಕ್ರೀದ್ ತ್ಯಾಗ-ಬಲಿದಾನಗಳ ಸಂಕೇತವಾಗಿರುವ ಹಬ್ಬವಾಗಿದೆ. ಎಲ್ಲ ಧರ್ಮಗಳೂ ಒಳ್ಳೆಯದನ್ನೇ ಬೋಧನೆ ಮಾಡಿವೆ. ಬಕ್ರೀದ್ ಕೂಡಾ ಅದೇ ಪರಂಪರೆಯ ಹಬ್ಬವಾಗಿದ್ದು, ಪ್ರತಿಸಲದಂತೆ ಎಲ್ಲರೂ ಪರಸ್ಪರ ಸಹೋದರತ್ವದಿಂದ ಕಾರ್ಯಕ್ರಮ ನಡೆಸುವದಾಗಿ ಹೇಳಿದರು.