ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ಇಂದು ರಿಲೀಸ್ ಆಗಿದೆ. ಆದ್ರೆ ಕನ್ನಡದ ಬಗ್ಗೆ ಕಮಲ್ ನೀಡಿರುವ ಹೇಳಿಕೆಯಿಂದ ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ. ಕೋರ್ಟ್ ಮುಂದಿನ ಆದೇಶದವರೆಗೂ ಸಿನಿಮಾ ರಿಲೀಸ್ ಆಗುತ್ತಿಲ್ಲ. ಈ ಮಧ್ಯೆ ಕಮಲ್ ಹಾಸನ್ ಬೆಂಗಳೂರಿನಲ್ಲಿ ನಡೆದ ಆರ್ ಸಿಬಿ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತ ಘಟನೆಯ ಬಗ್ಗೆ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನಟ ಕಮಲ್ ಹಾಸನ್, ‘ಬೆಂಗಳೂರಿನಲ್ಲಿ ನಡೆದಿರುವ ಕಾಲ್ತುಳಿತದ ಘಟನೆ ನಿಜಕ್ಕೂ ಹೃದಯ ವಿದ್ರಾವಕ ದುರಂತ.
ಈ ಘಟನೆಯಿಂದ ನಾನು ತೀವ್ರ ದುಃಖಿತನಾಗಿದ್ದೇನೆ ಮತ್ತು ಈ ದುಃಖದ ಕ್ಷಣದಲ್ಲಿ ನಾನು ಮೃತಪಟ್ಟ ಜನರ ಕುಟುಂಬಗಳಿಗೆ ಸಾಂತ್ವನ ಹೇಳಲು ಬಯಸುತ್ತೇನೆ ಮತ್ತು ಈ ಘಟನೆಯಲ್ಲಿ ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ’ ಅಂತ ಬರೆದುಕೊಂಡಿದ್ದಾರೆ.
ಐಪಿಎಲ್ 2025 ರ ಗೆಲುವಿನ ನಂತರ ಆರ್ಸಿಬಿ ಆಟಗಾರರನ್ನು ಸನ್ಮಾನಿಸಬೇಕಿದ್ದ ಕ್ರೀಡಾಂಗಣದಲ್ಲಿ ಅಗಾಧ ಜನಸಂದಣಿಯಿಂದಾಗಿ ಕಾಲ್ತುಳಿತ ಸಂಭವಿಸಿದೆ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ವಿಜಯೋತ್ಸವ ಪರೇಡ್ ಆಯೋಜನೆ ಮಾಡಿತ್ತು. ಈ ವೇಳೆ ಆರ್ಸಿಬಿ ಆಟಗಾರರನ್ನು ನೋಡಲು ಜನರು ಮುಗಿ ಬಿದ್ದರು. ಈ ವೇಳೆ ನಡೆದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟರೆ, 47 ಮಂದಿ ಗಾಯಗೊಂಡಿದ್ದಾರೆ.