ವಿಜಯಸಾಕ್ಷಿ ಸುದ್ದಿ, ಗದಗ
ಮನುಷ್ಯರ ಜೀವಕ್ಕೆ ತೊಂದರೆಯಾದರೂ ಹೊರಗೆ ಬಾರದ ಸ್ಥಿತಿಯಲ್ಲಿ ಇಂದು ಜನರಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೋಳಿಗೆ ಬೇಧಿ ಹತ್ತಿದೆ ಎಂಬ ಕಾರಣಕ್ಕೆ ಮನೆಯಿಂದ ಹೊರಗೆ ಬಂದಿರುವ ಹಾಸ್ಯಾಸ್ಪದ ಘಟನೆ ನಗರದಲ್ಲಿ ನಡೆದಿದೆ.
ನಗರದ ಟಾಂಗಾಕೂಟ ವೃತ್ತದಲ್ಲಿ ಈ ಘಟನೆ ನಡೆದಿದೆ. ನಗರದ ಸರಾಫ್ ಬಜಾರ್ ನ ವ್ಯಕ್ತಿಯೇ ಈ ರೀತಿ ಕಾರಣ ಹೇಳಿರುವ ವ್ಯಕ್ತಿ. ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದ ಕೋಳಿ ಹಿಡಿದು ಬಂದ ಈ ವ್ಯಕ್ತಿ, ತನ್ನನ್ನು ತಡೆದ ಪೊಲೀಸರಿಗೆ ಕೋಳಿಯ ಬಗ್ಗೆ ಹೇಳಿದ್ದಾನೆ. ಬೆಳಿಗ್ಗೆಯಿಂದ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೇನೆ ಎಂದು ಹೇಳಿದ್ದಾನೆ. ಈ ವ್ಯಕ್ತಿಯ ಕಾರಣ ಕೇಳಿ ಒಂದು ಕ್ಷಣ ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಗದಗ ನಗರದಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಹೇರಲಾಗಿದೆ. ಹೀಗಿದ್ದರೂ ಈ ವ್ಯಕ್ತಿ, ಕೋಳಿಯ ನೆಪ ಹೇಳಿಕೊಂಡು ಹೊರಗೆ ಬಂದಿದ್ದಾನೆ. ಕೋಳಿಯ ಬೇಧಿಯ ಕಾರಣ ಕೇಳಿ ಪೊಲೀಸರಿಗೆ ತಡೆಯಲಾರದಷ್ಟು ನಗು ಬಂದಿದೆ. ಈ ವ್ಯಕ್ತಿಯಿಂದಾಗಿ ಲಾಕ್ ಡೌನ್ ನ ಟೆನ್ಶನ್ ನಲ್ಲಿದ್ದ ಪೊಲೀಸರಿಗೆ ಮನರಂಜನೆ ಸಿಕ್ಕಂತಾಗಿದೆ.
ಈ ಕೋಳಿ ಸದಾಕಾಲ ನನ್ನೊಂದಿಗೆ ಇರುತ್ತಿತ್ತು. ಕುಂತರೆ, ನಿಂತರೂ ಇದು ನನ್ನ ಬಿಟ್ಟು ಅಗಲುತ್ತಿರಲಿಲ್ಲ. ಬೆಳಿಗ್ಗೆ ಎದ್ದ ಕೂಡಲೇ ಇದಕ್ಕೆ ಎರಡು ಬಾರಿ ಬೇಧಿ ಆಗಿದೆ. ಹೀಗಾಗಿ ಟೆನ್ಶನ್ ಆಗಿ, ಪಶು ಆಸ್ಪತ್ರೆಗೆ ಚಿಕಿತ್ಸೆಗೆ ಹೊರಟಿದ್ದೇನೆ ಎಂದು ಕೋಳಿಯ ಮಾಲೀಕ ಹೇಳಿದ್ದಾನೆ.



