ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಸ್ಥಳೀಯ ಎಫ್.ಎಂ. ಡಬಾಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಎಂ.ಕೆ. ಲಮಾಣಿ ಸೇವೆಯಿಂದ ನಿವೃತ್ತಿ ಹೊಂದಿದ ಪ್ರಯುಕ್ತ ತಹಸೀಲ್ದಾರ ಅನಿಲ ಬಡಿಗೇರ ಅಧ್ಯಕ್ಷತೆಯಲ್ಲಿ ತಾಲೂಕಾ ಆಡಳಿತದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಅನಿಲ ಬಡಿಗೇರ, ಸರಕಾರಿ ಸೇವೆಯಲ್ಲಿ ವಯೋ ನಿವೃತ್ತಿ ಅನಿವಾರ್ಯವಾಗಿದೆ. ಎಂ.ಕೆ. ಲಮಾಣಿ ಅವರು ತಾಲೂಕಾಡಳಿತದ ವತಿಯಿಂದ ನಡೆಯುತ್ತಿದ್ದ ಅನೇಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ವಿಶೇಷವಾಗಿ ಚುನಾವಣಾ ಸಂದರ್ಭದಲ್ಲಿ ಮಸ್ಟರಿಂಗ್ ಕೇಂದ್ರಗಳಲ್ಲಿ ಅಧಿಕಾರಿಗಳ ನಿರ್ದೇಶನದಂತೆ ಚುನಾವಣೆ ಸಿಬ್ಬಂದಿಗೆ ತಮ್ಮ ನಿರೂಪಣೆಯ ಮೂಲಕ ಕೆಲಸವನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಮಾಜಕ್ಕೆ ಇವರ ಸೇವೆ ಇನ್ನಷ್ಟು ಸಿಗಲಿ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, ಎಂ.ಕೆ. ಲಮಾಣಿ ಬಡ ಕುಟುಂಬದಲ್ಲಿ ಜನಿಸಿ, ಉಪನ್ಯಾಸಕನಾಗಿ, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷರಾಗಿ, ಮಾಧ್ಯಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷರಾಗಿ ಇನ್ನೂ ಹತ್ತು ಹಲವು ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಇವರ ಸೇವೆ ಸದಾ ಹೀಗೆ ಮುಂದುವರೆಯಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಕೆ. ಲಮಾಣಿ, ತಾಲೂಕಾ ಆಡಳಿತದ ವತಿಯಿಂದ ನಡೆಯುತ್ತಿದ್ದ ಅನೇಕ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ಭಾಗ್ಯ ನನ್ನದಾಗಿದ್ದು, ಇದರಿಂದ ನನ್ನ ವೃತ್ತಿ ಬದುಕಿನಲ್ಲಿ ಮರೆಯಲಾಗದ ಅನೇಕ ಕ್ಷಣಗಳನ್ನು ಕಂಡಿದ್ದೇನೆ. ತಾಲೂಕಾಡಳಿತದ ಸನ್ಮಾನ ನನಗೆ ಇನ್ನಷ್ಟು ಸಮಾಜಮುಖಿ ಕೆಲಸಕ್ಕೆ ಪ್ರೇರಣೆ ನೀಡಿದೆ ಎಂದರು.
ಶಿರಸ್ತೇದಾರ ಎಸ್.ಎಸ್. ಅಸ್ಕಿ, ಮುಲ್ಲಾ, ಪೂಜಾರ, ಕಂದಾಯ ನಿರೀಕ್ಷಕ ಕಾತ್ರಾಳ, ಕಗ್ಗಲಗೌಡರ, ರಾಧಾ ದೇಸಾಯಿಪಟ್ಟಿ, ಮಂಜುಳಾ ಆಕಳದ, ಅಡಿವೆಣ್ಣವರ ಮುಂತಾದವರು ಉಪಸ್ಥಿತರಿದ್ದರು.