ಭರವಸೆ ಮೂಡಿಸಿದ ಮೃಗಶಿರ ಮಳೆ

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮುಂಗಾರಿನ ಪ್ರಮುಖ ಮಳೆ ರೋಹಿಣಿ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ ರೈತ ಸಮುದಾಯಕ್ಕೆ ಬುಧವಾರ ಕಾರಹುಣ್ಣಿಮೆ ಸಂಭ್ರಮದ ಜತೆಗೆ ಅಬ್ಬರಿಸಿದ ಮೃಗಶಿರ ಮಳೆ ಕಳೆ ತಂದಿದೆ. ಪಟ್ಟಣ ಸೇರಿ ತಾಲೂಕಿನ ಶಿಗ್ಲಿ, ರಾಮಗಿರಿ, ಗೊಜನೂರ, ಅಡರಕಟ್ಟಿ, ದೊಡ್ಡೂರ, ಸೂರಣಗಿ, ಬಡ್ನಿ, ಬಟ್ಟೂರ, ಶೆಟ್ಟಿಕೆರಿ, ಆದ್ರಳ್ಳಿ, ಯಳವತ್ತಿ ಸೇರಿ ತಾಲೂಕಿನಾದ್ಯಂತ ಮಳೆಯಾಗಿದೆ. ಈ ವರ್ಷ ಉತ್ತಮ ಮಳೆ-ಬೆಳೆಯ ನೀರೀಕ್ಷೆಯ ನಡುವೆಯೂ ಕಂಗಾಲಾಗಿದ್ದ ರೈತರಿಗೆ ಈ ಮಳೆ ಮತ್ತೆ ಭರವಸೆ ಮೂಡಿಸಿತು.

Advertisement

ರೋಹಿಣಿ ಮಳೆಯಾಗುತ್ತದೆ ಎಂಬ ಆಶಾಭಾವನೆಯಿಂದ ತಾಲೂಕಿನಾದ್ಯಂತ ಶೇ.50ರಷ್ಟು ರೈತರು ಹೆಸರು, ಶೇಂಗಾ, ಹತ್ತಿ, ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದರು. ಮಳೆಯಾಗದ್ದರಿಂದ ಬಿತ್ತಿದ ಬೀಜಗಳು ಇಲಿ-ಹೆಗ್ಗಣಗಳ ಪಾಲಾಗುತ್ತಿದ್ದು ರೈತರು ಚಿಂತೆಗೀಡಾಗಿದ್ದರು. ಮಳೆಗಾಗಿ ನಿತ್ಯ ಬಾನತ್ತ ಚಿತ್ತ ಹರಿಸಿದ್ದ ರೈತ ಸಮುದಾಯದಲ್ಲಿ ಇದೀಗ ಮಂದಹಾಸ ಮೂಡಿದೆ.

ಬುಧವಾರ ಸುರಿದ ಮಳೆಯಿಂದ ಚರಂಡಿಗಳು ತುಂಬಿ ನೀರು ರಸ್ತೆ ಮೇಲೆ ಹರಿದು ಸಂಚಾರ ಅಸ್ತವ್ಯಸ್ಥಗೊಂಡಿತು. ಪಟ್ಟಣದ ಕುಂಬಾರ ಓಣಿ, ಬೆಣ್ಣಿಪೇಟೆ, ಬಸವೇಶ್ವರ ನಗರ, ಜನ್ನತನಗರ, ಮುಕ್ತಿನಗರ ಸೇರಿ ಹಲವು ಕಡೆ ಮನಗೆಳಲ್ಲಿ ನೀರು ಹೊಕ್ಕಿದೆ. ಮುಖ್ಯ ಬಜಾರ್ ರಸ್ತೆ, ಹಾವಳಿ ಆಂಜನೇಯ ದೇವಸ್ಥಾನದ ಸರ್ಕಲ್‌ನಲ್ಲಿ ಸಂಗ್ರಹಗೊಂಡ ಅಪಾರ ಪ್ರಮಾಣ ಕೊಳಚೆ ನೀರಿನಿಂದ ವಾಹನ ಸವಾರರು ಪರದಾಡಿದರು. ಹೊಸ ಬಸ್ ನಿಲ್ದಾಣದಿಂದ ಗದಗ ಅಗಸಿವರೆಗೂ ಚರಂಡಿ ನೀರು ಅಪಾರ ಪ್ರಮಾಣದಲ್ಲಿ ಸೋಮೇಶ್ವರ ದ್ವಾರದ ಹತ್ತಿರ ಸಂಗ್ರಹಗೊಂಡು ಗದಗ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು.


Spread the love

LEAVE A REPLY

Please enter your comment!
Please enter your name here