ನೆಲಮಂಗಲ:- ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲಹಳ್ಳಿಯಲ್ಲಿ ಒಂದು ಹುಡುಗಿಗಾಗಿ ಇಬ್ಬರ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವಂತಹ ಘಟನೆ ಜರುಗಿದೆ. ಲವರ್ನ ಮದುವೆಯಾಗಲು ಮುಂದಾಗಿದ್ದ ಸ್ನೇಹಿತನನ್ನೆ ಆರೋಪಿ ಕೊಲೆ ಮಾಡಿದ್ದು, ಇದೀಗ ಜೈಲುಪಾಲಾಗಿದ್ದಾನೆ. ಮಾತುಕತೆಗೆ ಎಂದು ಕರೆದವನು 21 ಬಾರಿ ಇರಿದು ಹತ್ಯೆಗೈದಿದ್ದಾನೆ. 30 ವರ್ಷದ ವೇಣುಗೋಪಾಲ್ ಬಂಧಿತ ಆರೋಪಿ.
ಆರೋಪಿ ಸಿಕ್ಕಿದ್ಹೇಗೆ?
ಆರೋಪಿ ವೇಣುಗೊಪಾಲ ರೈಲಿನಲ್ಲಿ ಚುರುಮುರಿ ಮಾರಾಟ ಮಾಡಿಕೊಂಡಿದ್ದ. ಕೊಲೆ ನಂತರ ಕುಣಿಗಲ್ನಿಂದ ರೈಲಿನಲ್ಲೇ ತಿರುಪತಿಗೆ ತೆರಳಿದ್ದ. ತಿರುಪತಿಗೆ ತೆರಳಿ ಮುಖ ಚಹರೆ ಗೊತ್ತಾಗದಂತೆ ಗುಂಡು ಹೊಡೆಸಿಕೊಂಡಿದ್ದ. ನಂತರ ತಿರುಪತಿಯಿಂದ ಮಂಡ್ಯಗೆ ತೆರಳಿದ್ದ ವೇಣು, ತನ್ನ ಸಂಬಂಧಿಕ ಮನೆಯಲ್ಲಿ ಕೆಲಸ ಮಾಡಿಕೊಂಡಿರುವ ಪ್ಲ್ಯಾನ್ ಮಾಡಿದ್ದಾನೆ. ಅಷ್ಟರಲ್ಲಿ ಮಾಹಿತಿ ಕಲೆಹಾಕಿದ್ದ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.
ಇನ್ನೂ 8 ವರ್ಷದ ಹಿಂದೆ ಗೊಲ್ಲಹಳ್ಳಿಯ ಓರ್ವ ಯುವತಿಯನ್ನ ವೇಣುಗೊಪಾಲ ಪ್ರೀತಿಸಿದ್ದ. ಕಳೆದ ಮೂರು ತಿಂಗಳ ಹಿಂದೆ ಪೋಷಕರಿಗೆ ಗೊತ್ತಾಗಿ ಇಬ್ಬರನ್ನ ದೂರ ಮಾಡಿದ್ದರು. ನಂತರ ಇದೇ ಯುವತಿಗೆ ಮನೆಯವರೆಲ್ಲಾ ಸೇರಿ ದರ್ಶನ್ ಜೊತೆ ಮದುವೆ ಫಿಕ್ಸ್ ಮಾಡಿದ್ದರು. ಈ ವಿಚಾರ ತಿಳಿದಿದ್ದ ವೇಣುಗೊಪಾಲ ಕೋಪಗೊಂಡಿದ್ದ.
ಕಳೆದ ಶುಕ್ರವಾರ ಕುಡಿದ ಮತ್ತಿನಲ್ಲಿದ್ದ ವೇಣು, ದರ್ಶನ್ಗೆ ಫೊನ್ ಮಾಡಿ ಮಾತಡಬೇಕು ಬಾ ಎಂದಿದ್ದ. ಈ ವೇಳೆ ದರ್ಶನ್ ಯುವತಿಗೆ ಕರೆ ಮಾಡಿ ವೇಣು ಕರೆಯುತ್ತಿದ್ದಾನೆ ಎಂದಿದ್ದಾನೆ. ಯುವತಿ ಹೋಗಬೇಡ ಅಂತ ಹೇಳಿದರೂ ದರ್ಶನ್ ಕೇಳಿಲ್ಲ. ದರ್ಶನ್, ವೇಣುವನ್ನು ತನ್ನ ಜಮೀನಿಗೆ ಕರೆಸಿಕೊಂಡಿದ್ದಾನೆ. ಈ ಮಧ್ಯೆ ವೇಣು ಹಾಗೂ ದರ್ಶನ್ ಇಬ್ಬರ ನಡುವೆ ಜಗಳ ಶುರುವಾಗಿದೆ. ನಂತರ ತನ್ನ ಬಳಿಯಿದ್ದ ಚಾಕುವಿನಿಂದ ದರ್ಶನ್ಗೆ 21 ಬಾರಿ ಇರಿದಿದ್ದಾನೆ. ಕೊನೆಯ ಬಾರಿ ಇರಿಯುವ ವೇಳೆಯಲ್ಲಿ ದರ್ಶನ್ ಯುವತಿಗೆ ಫೋನ್ ಮಾಡಿ ವೇಣು ಚಾಕುವಿನಿಂದ ಇರಿಯುತ್ತಿದ್ದಾನೆ ಎಂದು ಹೇಳಿ ಪ್ರಾಣಬಿಟ್ಟಿದ್ದಾನೆ.
ಇನ್ನು ಆರೋಪಿ ವೇಣುಗೊಪಾಲ ಪೊಲೀಸರ ಮುಂದೆ ನಡೆದಿರುವ ಘಟನೆ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.