ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸಿನಿಮಾ ರಿಲೀಸ್ ಆಗಿ ಆಗಲೇ ಎಂಟು ದಿನ ಕಳೆದಿದೆ. ಆದರೆ ಕಮಲ್ ಹಾಸನ್ ಕನ್ನಡದ ಬಗ್ಗೆ ಹೇಳಿದ ಹೇಳಿಕೆಯಿಂದ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾಗೆ ನಿಷೇಧ ಹೇರಲಾಗಿತ್ತು. ಇದೀಗ ಕರ್ನಾಟಕ ಸರ್ಕಾರ ವಿಧಿಸಿರುವ ‘ನ್ಯಾಯಾಂಗೇತರ ನಿಷೇಧ’ವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಮನಮೋಹನ್ ಅವರಿದ್ದ ಪೀಠವು ಈ ವಿಷಯದಲ್ಲಿ ಕರ್ನಾಟಕದ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ (ಗೃಹ) ಮತ್ತು ಪೊಲೀಸ್ ಮಹಾನಿರ್ದೇಶಕರ ಪ್ರತಿಕ್ರಿಯೆಗಳನ್ನು ಕೋರಿದೆ ಮತ್ತು ಮುಂದಿನ ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಿದೆ.
ಈ ಹಿಂದೆ ಥಗ್ ಲೈಫ್ ಬಿಡುಗಡೆಗೆ ರಕ್ಷಣೆ ಕೋರಿ ಕಮಲ್ ಹಾಸನ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕಮಲ್ ಹಾಸನ್ ಅವರಿಗೆ ಕ್ಷಮೆ ಕೇಳುವಂತೆ ಸೂಚನೆ ನೀಡಿತ್ತು. ಆದರೂ ಕಮಲ್ ಹಾಸನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಕ್ಷಮೆ ಕೇಳಲು ಹಿಂದೇಟು ಹಾಕಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ‘ಇನ್ನೂ ಕ್ಷಮೆ ಕೇಳಿಲ್ಲವೇ’ ಎಂದು ಪ್ರಶ್ನೆ ಮಾಡಿದೆ.ಇದಕ್ಕೆ ಉತ್ತರಿಸಿದ ಕನ್ನಡ ಸಾಹಿತ್ಯ ಪರಿಷತ್ ಪರ ಹಿರಿಯ ವಕೀಲ ಎಸ್.ಬಸವರಾಜ್, ‘ಇಲ್ಲ ಕಮಲ್ ಹಾಸನ್ ಅವರು ಸ್ಟುಪಿಡ್ ಸ್ಟೇಟ್ಮೆಂಟ್ ನೀಡಿದ್ದಾರೆ. ಕರ್ನಾಟಕ, ಕನ್ನಡ ಪದ ಪುರಾಣಗಳಲ್ಲೂ ಬಳಕೆಯಾಗಿದೆ’ ಎಂದು ಹೇಳಿದ್ದಾರೆ.
ಹಿರಿಯ ವಕೀಲ ಎಸ್.ಬಸವರಾಜ್ ಅವರು ‘ಸ್ಟುಪಿಡ್’ ಪದ ಬಳಕೆ ಮಾಡಿದ್ದಕ್ಕೆ ‘ರಾಜ್ಕಮಲ್ ಫಿಲ್ಮ್’ ಪರ ವಕೀಲರು ಆಕ್ಷೇಪ ಹೊರಹಾಕಿದರು. ಆ ಬಳಿಕ ಸ್ಟುಪಿಡ್ ಹೇಳಿಕೆಗೆ ಬಸವರಾಜ್ ವಿಷಾದ ವ್ಯಕ್ತಪಡಿಸಿದರು. ಸದ್ಯ ಪ್ರಕರಣದ ವಿಚಾರಣೆ ಜೂನ್ 20ಕ್ಕೆ ಮುಂದೂಡಲಾಗಿದೆ.