ಮನುಕುಲದ ಉಳಿವಿಗೆ ಗಿಡಗಳನ್ನು ಬೆಳೆಸಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಪರಿಶುದ್ಧವಾದ ನೀರು, ಗಾಳಿ, ಪರಿಸರವೇ ಮಾನವಕುಲದ ಉಳಿವು. ಮನುಕುಲದ ಅಸ್ಥಿತ್ವಕ್ಕೆ ಗಿಡಮರಗಳನ್ನು ಬೆಳೆಸಬೇಕು. ಹಸಿರೇ ಮಾನವನ ಉಸಿರು ಎಂದು ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ 2749ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಾಲ್ಯದಲ್ಲಿಯೇ ಮಕ್ಕಳಿಗೆ ಪರಿಸರದ ಬಗ್ಗೆ ತಿಳುವಳಿಕೆ ಮುಖ್ಯ. ಓಜೋನ್ ಪರದೆ ಹರಿದರೆ ಸುರಕ್ಷಿತವಲ್ಲ. ಸೂರ್ಯನ ಕಿರಣಗಳು ನೇರವಾಗಿ ಬಂದರೆ ಚರ್ಮರೋಗದಂತಹ ಸಮಸ್ಯೆಗಳು ಕಾಡುತ್ತವೆ. ಕುಡಿವ ನೀರು, ಉಸಿರಾಡುವ ಗಾಳಿ, ಕೇಳುವ ಶಬ್ದ, ತಿನ್ನುವ ಆಹಾರ ಎಲ್ಲವೂ ಮಾಲಿನ್ಯವಾಗಿದೆ. ಮಾನವನ ಬದುಕು ದುಸ್ತರವಾಗಿದೆ ಎಂದರು.

ಉಪನ್ಯಾಸಕರಾಗಿ ಆಗಮಿಸಿದ್ದ ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪುರಸ್ಕಾರ ಟ್ರಸ್ಟ್ನ ಮಾಜಿ ಅಧ್ಯಕ್ಷ ವಿರುಪಾಕ್ಷಪ್ಪ ಮ್ಯಾಗೇರಿ ಮಾತನಾಡಿ, ವಿಶ್ವ ಪರಿಸರದ ಆಚರಣೆ 1972ರಿಂದ ಪ್ರಾರಂಭವಾಗಿದೆ. ಆದರೂ ತಾಪಮಾನ ವಿಪರೀತ ಏರುತ್ತಿದೆ. ಪ್ರಾಣಿ-ಪಕ್ಷಿ, ಮಾನವರಿಗೆ ತುಂಬಾ ತೊಂದರೆ ಆಗುತ್ತಿದೆ. ಗ್ರೀನ್ ಹೌಸ್ ಎಫೆಕ್ಟ್‌ ನಿಂದ ಉಷ್ಣತೆ ಜಾಸ್ತಿ ಆಗುತ್ತಿದೆ. ಕೈಗಾರಿಕೆಗೆ, ಕೃಷಿಗೆ, ಕಟ್ಟಿಗೆಗೆ, ಕಟ್ಟಡಕ್ಕೆ ಮುಂತಾದ ದುರಾಸೆಗಾಗಿ ಕಾಡು ನಾಶ ಮಾಡುತ್ತೇವೆ. ಅರಣ್ಯವೇ ತೆರೆದ ಆಮ್ಲಜನಕದ ಕಾರ್ಖಾನೆ. ಅದರ ರಕ್ಷಣೆ ನಮ್ಮೆಲ್ಲರ ಹೊಣೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಸುಂದರಲಾಲ್ ಬಹುಗುಣ ಮತ್ತು ಸಾಲುಮರದ ತಿಮ್ಮಕ್ಕರ ಸಾಹಸದ ಕತೆಗಳನ್ನು ಮಕ್ಕಳಿಗೆ, ಸಮಾಜಕ್ಕೆ ತಿಳಿಸಿ ಜಾಗೃತಿ ಮೂಡಿಸುವುದು ಅವಶ್ಯ ಎಂದರು.

ಅನ್ನಪೂರ್ಣ ಬಡಿಗೇರ, ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ಪರಿಸರದ ಗೀತೆಯನ್ನು ಸಾಂದರ್ಭಿಕವಾಗಿ ಹಾಡಿ ಸಂಗೀತ ಸೇವೆಯನ್ನು ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಚಂದ್ರಿಕಾ ಹೊಂಬಳ ಹಾಗೂ ವಚನ ಚಿಂತನವನ್ನು ಲಕ್ಷ್ಮೀ ಪಟ್ಟಣ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ತಂಬ್ರಳ್ಳಿಯ ಅಕ್ಕಿ ತೋಟಪ್ಪನವರು ವಹಿಸಿಕೊಂಡಿದ್ದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ ಸಹಕಾರ್ಯದರ್ಶಿ ಸೋಮನಾಥ ಪುರಾಣಿಕ ಹಾಗೂ ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ, ಸಹ ಚೇರಮನ್ ಶಿವಾನಂದ ಹೊಂಬಳ ಸೇರಿದಂತೆ ಶ್ರೀಮಠದ ಸದ್ಭಕ್ತರು ಉಪಸ್ಥಿತರಿದ್ದರು.

ಅರುಣಾ ಹಳಕಟ್ಟಿ ಸ್ವಾಗತಿಸಿದರು. ವಿದ್ಯಾ ಪ್ರಭು ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಪರಿಸರ ಮಾಲಿನ್ಯ ನಿವಾರಣೆಗೆ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣ ತ್ಯಜಿಸಬೇಕು. ಹೊಗೆ ರಹಿತ ಕಾರ್ಖಾನೆಗಳು ಬರಬೇಕು. ಗುರುಗಳಾದ ಪೂಜ್ಯ ಸಿದ್ದಲಿಂಗ ಸ್ವಾಮೀಜಿಗಳು ಸ್ವತಃ ಸಾಕಷ್ಟು ಗಿಡಮರಗಳನ್ನು ಬೆಳೆಸಿದ್ದಾರೆ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ಭಾಗದ ಜೀವನಾಡಿಯಾದ ಕಪ್ಪತ್ತಗುಡ್ಡ ಪ್ರದೇಶವನ್ನು ಗಣಿಗಾರಿಕೆ ಕಂಪನಿಗಳಿಂದ ಸಂರಕ್ಷಿಸಿದ್ದಾರೆ. ಪ್ರತಿಯೊಬ್ಬರಲ್ಲಿಯೂ ಪರಿಸರದ ಬಗ್ಗೆ ಜಾಗೃತಿ ಅವಶ್ಯ ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ನುಡಿದರು.


Spread the love

LEAVE A REPLY

Please enter your comment!
Please enter your name here