ಬೆಂಗಳೂರು:- ಆರ್ಸಿಬಿ ವಿಜಯೋತ್ಸವ ಸಂಭ್ರಮಿಸುವ ಬದಲು ಬೆಟ್ಟು ತೋರಿಸುವ ಪ್ರಕ್ರಿಯೆ ಸರಿಯಲ್ಲ ಎಂದು ಬೆಂಗಳೂರಿನಲ್ಲಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ವೀರಪ್ಪ ಮೊಯ್ಲಿ ಬೇಸರ ಹೊರ ಹಾಕಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ವೀರಪ್ಪ ಮೊಯ್ಲಿ, ಆರ್ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ವಿವಿಧ ತನಿಖೆ ನಡೆಸುವ ಬದಲು ನಿವೃತ್ತ ನ್ಯಾಯಾಧೀಶರಿಂದ ಒಂದೇ ತನಿಖೆ ನಡೆಸಬೇಕು. ವರದಿ ತರಿಸಿ ಸಾರ್ವಜನಿಕರು ಮತ್ತು ಕ್ರಿಕೆಟ್ ಪ್ರೇಮಿಗಳಲ್ಲಿ ವಿಶ್ವಾಸ ಮೂಡಿಸಲು ಸರಕಾರ ಕ್ರಮ ವಹಿಸಬೇಕು. ಕಾಲ್ತುಳಿತ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ, ಸಿಐಡಿ ಹಾಗೂ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಮೂರು ತನಿಖೆ ನಡೆಸಲಾಗುವುದು ಎಂದು ಪ್ರಕಟಿಸಿರುವುದು ಸರಿಯಲ್ಲ. ಇದರಿಂದ ಸರಕಾರದ ಆಡಳಿತಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆಗಳಿವೆ. ಹೀಗಾಗಿ ಈ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು’ ಎಂದು ಮನವಿ ಮಾಡಿದ್ದಾರೆ.
ಕಾಲ್ತುಳಿತದ ಆಕಸ್ಮಿಕ ಘಟನೆಯಿಂದ ಅನೇಕ ದಶಕಗಳಿಂದ ಗಳಿಸಿದ ಕಾಂಗ್ರೆಸ್ ಪಕ್ಷದ ವರ್ಚಸ್ಸನ್ನು ಅಳಿಸಿಹಾಕಬಾರದು. ಈ ಬಗ್ಗೆ ವಿಶೇಷವಾದ ಎಚ್ಚರಿಕೆಯಿಂದ ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ. ದುರ್ಘಟನೆ ಹಿನ್ನೆಲೆಯಲ್ಲಿ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿನ ಕ್ರಿಕೆಟ್ ವ್ಯವಸ್ಥೆಯ ಮೇಲೆಯೇ ಕೆಟ್ಟ ಹೆಸರು ಬಂದಿದೆ. ಆ ಕೆಟ್ಟ ಹೆಸರನ್ನು ಅಳಿಸಿಹಾಕಬೇಕು’ ಎಂದು ವೀರಪ್ಪ ಮೊಯ್ಲಿ ಸಲಹೆ ನೀಡಿದ್ದಾರೆ. ಆರ್ಸಿಬಿ ವಿಜಯೋತ್ಸವವನ್ನು ಸಂಭ್ರಮಿಸುವ ಬದಲು ಬೆಟ್ಟು ತೋರಿಸುವ ಪ್ರಕ್ರಿಯೆ ನಡೆದಿದೆ, ಇದು ಸಲ್ಲದು. ಕಾಲ್ತುಳಿತದಲ್ಲಿ ಅಸುನೀಗಿದವರ ಕುಟುಂಬದ ಸದಸ್ಯರು ಹಾಗೂ ಗಾಯಾಳುಗಳಲ್ಲಿ ವಿಶ್ವಾಸ ಮೂಡಿಸಬೇಕು. ಅಲ್ಲದೆ, ಕ್ರಿಕೆಟ್ ಪ್ರೇಮಿಗಳಲ್ಲಿಯೂ ಸುರಕ್ಷತೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕ್ಷಿಪ್ರ ಗತಿಯಲ್ಲಿ ಪ್ರಕರಣದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ವೀರಪ್ಪ ಮೊಯ್ಲಿ ಕೋರಿದ್ದಾರೆ