ವಿಜಯಸಾಕ್ಷಿ ಸುದ್ದಿ, ಗದಗ: ಜಗತ್ತಿನ ಸೃಷ್ಟಿಯನ್ನು ನೋಡಲು ನಮ್ಮೆಲ್ಲರಿಗೂ ಆ ಭಗವಂತ ಕಣ್ಣುಗಳನ್ನು ನೀಡಿದ್ದಾನೆ. ಅದರೆ ಒಳ ಜಗತ್ತನ್ನು ನೋಡಲು ಉಭಯ ಶ್ರೀಗಳನ್ನು ಸೃಷ್ಟಿ ಮಾಡಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ಪರಮಪೂಜ್ಯ ಲಿಂ. ಪಂ. ಪಂಚಾಕ್ಷರಿ ಗವಾಯಿಗಳವರ 81ನೇ ಹಾಗೂ ಪದ್ಮಭೂಷಣ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ 15ನೇ ಪುಣ್ಯಸ್ಮರಣೋತ್ಸವ ಹಾಗೂ ಉಭಯ ಗುರುಗಳ ಜಾತ್ರಾ ಮಹೋತ್ಸವದ ಅಂಗವಾಗಿ ಜರುಗಿದ ಧರ್ಮಸಭೆ, ಕೀರ್ತನ ಸಮ್ಮೇಳನ ಹಾಗೂ ಅಂಧರಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಭಾವನಾತ್ಮಕವಾಗಿ ಯಾವುದಾದರೂ ಅಂತಿಮ ಯಾತ್ರೆ ನಡೆದಿದ್ದರೆ ಅದು ಶ್ರೀಗುರು ಪುಟ್ಟರಾಜ ಕವಿ ಗವಾಯಿಗಳವರ ಅಂತಿಮ ಯಾತ್ರೆಯಾಗಿದೆ. ಈ ಯಾತ್ರೆಯಲ್ಲಿ ಪಾಲ್ಗೊಂಡಿರುವುದು ನನ್ನ ಪೂರ್ವಜನ್ಮದ ಪುಣ್ಯದ ಫಲ. ಉಭಯ ಶ್ರೀಗಳು ದೇವರ ಮಕ್ಕಳು. ಜಗತ್ತಿನಲ್ಲಿ ಮುಗ್ಧತೆ ಮತ್ತು ಆತ್ಮಸಾಕ್ಷಿಗಳನ್ನು ಕಾಪಾಡಿಕೊಂಡು ಬರುವುದು ಅಷ್ಟು ಸುಲಭ ಮಾತಲ್ಲ. ಅವುಗಳನ್ನು ಜೀವನದುದ್ದಕ್ಕೂ ನಡೆ-ನುಡಿಗಳಿಂದ ಉಭಯ ಗುರುಗಳು ಕಾಪಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಶಿರಹಟ್ಟಿಯ ಜ. ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಅಡ್ನೂರ-ರಾಜೂರ-ಗದಗ ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಶಿವಾನಂದ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಹೋತನಹಳ್ಳಿ ಸಿಂದಗಿ ಶಾಖಾಮಠದ ಪೂಜ್ಯಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಗದುಗಿನ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು, ಮುಕ್ಕಣ್ಣೇಶ್ವರ ಮಠದ ಪೂಜ್ಯಶ್ರೀ ಶಂಕರಾನಂದ ಸ್ವಾಮಿಗಳು, ಬೆಳಹೊಡದ ಪೂಜ್ಯಶ್ರೀ ಪರಿಪೂರ್ಣಾನಂದ ಭಾರತಿ ಮಹಾಸ್ವಾಮಿಗಳು, ಮುದ್ದೇಬಿಹಾಳದ ಪೂಜ್ಯಶ್ರೀ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಅಂತೂರು-ಬೆಂತೂರಿನ ಪೂಜ್ಯಶ್ರೀ ಕುಮಾರದೇವರು, ಲಿಂಗಸೂರಿನ ಪೂಜ್ಯಶ್ರೀ ಶಿವಶರಣೆ ನಂದೀಶ್ವರಿ ಅಮ್ಮನವರು ಸಮ್ಮುಖ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎಸ್.ಎಸ್. ಪಾಟೀಲ್, ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವೀಂದ್ರನಾಥ್ ದಂಡಿನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಗ್ಯಾರಂಟಿ ಯೋಜನೆಯ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ, ಜಯಶ್ರೀ ಉಗಲಾಟದ, ಶಿವಲೀಲಾ ಅಕ್ಕಿ, ಡಾ. ರಾಜೇಂದ್ರ ಬಸರಿಗಿಡದ, ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ರು, ಪಂಕಜ ಬಾಪಣಾ, ಬಲರಾಮ ಬಸವಾ, ಬಸವರಾಜ ಬಿಂಗಿ, ಎಸ್.ಎಂ. ಗೌಡರ, ಸಾಧಿಕ ನರಗುಂದ, ವಿಕ್ರಂ ಜೈನ, ಅಯ್ಯಪ್ಪ ನಾಯ್ಕರ, ಮಲ್ಕಾಪುರದ ಗುಂಡಪ್ಪ ಕಬ್ಬಿಣದ ಮುಂತಾದವರು ಉಸ್ಥಿತರಿದ್ದರು.
ಪೂಜ್ಯಶ್ರೀ ಡಾ. ಕಲ್ಲಯ್ಯಜ್ಜನವರು ಅಭಾರ ಮನ್ನಣೆ ಮಾಡಿದರು. ಬೆಳಿಗ್ಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ನಾಗನೂರಿನ ದಾಲಾಸಾಬ (ಪಾಪಾ), ಬೆಳವಣಿಕೆಯ ಮುತ್ತಪ್ಪ ಶೆಗಣ, ನಾಗರಾಜ ನಾಗನೂರ, ಪ್ರಾಚಾರ್ಯ ಶಶಿಧರ ನರಗುಂದ, ಶರಣಪ್ಪ ಕುಸುಗಲ್, ಯೋಗೇಶ ಗಡಗಿ, ನಾಗರಾಜ ಪಾಟೀಲ, ಆನಂದ ತಮನಾಳ, ಗದುಗಿನ ಆಂಜನೇಯ ಬಳ್ಳಾರಿ, ನರಗುಂದದ ಉಮೇಶಗೌಡ್ರ ಪಾಟೀಲ, ಗದುಗಿನ ವೀರೇಶ ಹೆಬಸೂರ, ದಾನೇಶ ಗುಜಮಾಗಡಿ ಅವರುಗಳನ್ನು ಸನ್ಮಾನಿಸಲಾಯಿತು.
ರಾತ್ರಿ ಶ್ರೀ ಕುಮಾರೇಶ್ವರ ಕೃಪಾಪೋಷಿತ ಪಂ. ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದಿಂದ `ಬಂದರ ನೋಡ ಬಂಗಾರಿ’ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಅಡ್ನೂರ-ರಾಜೂರ-ಗದಗ ಬ್ರಹನ್ಮಠದ ಪೂಜ್ಯಶ್ರೀ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯಶ್ರೀ ಕಲ್ಲಯ್ಯಜ್ಜನವರು ಅಧ್ಯಕ್ಷತೆ ವಹಿಸಿದ್ದರು. ವೀರೇಶ್ವರ ಪುಣ್ಯಾಶ್ರಮ ಸೋಲ್ ಟ್ರಸ್ಟ್ನ ಸದಸ್ಯ ವಸಂತಗೌಡ ಪೊಲೀಸ್ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವೀರೇಶ್ವರ ಪುಣ್ಯಾಶ್ರಮ ಸೋಲ್ನ ಉಪಾಧ್ಯಕ್ಷರಾದ ಪ್ರಕಾಶ ಬಸರಿಗಿಡದ ಉಪಸ್ಥಿತರಿದ್ದರು.
“ಪಂ. ಪುಟ್ಟರಾಜ ಕವಿ ಗವಾಯಿಗಳವರ ಸ್ಮಾರಕ ಭವನ ಆದಷ್ಟು ಶೀಘ್ರ ಪೂರ್ಣಗೊಳ್ಳಲಿ. ಈ ಕುರಿತು ಸಚಿವರೊಂದಿಗೆ ಮಾತನಾಡುತ್ತೇನೆ ಮತ್ತು ಕೇಂದ್ರ ಸರ್ಕಾರದಿಂದ ಲಭ್ಯವಾಗುವ ನೆರವು ನೀಡಲು ಸಿದ್ಧನಿದ್ದೇನೆ”
-ಬಸವರಾಜ ಬೊಮ್ಮಾಯಿ.
ಸಂಸದರು, ಹಾವೇರಿ-ಗದಗ.