ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶುಕ್ರವಾರ ರಾತ್ರಿ 10.30ರ ಹೊತ್ತಿಗೆ ಮರಳು ಖಾಲಿ ಮಾಡಿಕೊಂಡು ಸವಣೂರ ಕಡೆಯಿಂದ ಲಕ್ಷ್ಮೇಶ್ವರದ ಕಡೆ ಬರುತ್ತಿದ್ದ ಟಿಪ್ಪರ್ ಹಾಗೂ ಗದಗದಿಂದ ಬೆಂಗಳೂರು ಕಡೆ ಹೊರಟಿದ್ದ ಖಾಸಗಿ ಬಸ್ ನಡುವೆ ನಡೆದ ಅಪಘಾತದಲ್ಲಿ ಕೆಲವರು ತೀವ್ರ ಗಾಯಗೊಂಡಿರುವ ಘಟನೆ ಜರುಗಿದೆ. ಟಿಪ್ಪರ್ ಹಾಗೂ ಬಸ್ ಚಾಲಕರಿಗೆ ಗಾಯಗಳಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಪಟ್ಟಣದ ಅಗಡಿ ಇಂಜಿನಿಯರಿಂಗ್ ಕಾಲೇಜು ಬಳಿ ಅಪಘಾತ ಸಂಭವಿಸಿದ್ದು, ಢಿಕ್ಕಿಯ ರಭಸಕ್ಕೆ ಟಿಪ್ಪರ್ ಕಂದಕಕ್ಕೆ ಉರುಳಿದೆ. ಬಸ್ ಮೇಲಿನ ಸ್ಲೀಪರ್ ಕೋಚ್ ಕಿಟಕಿ ಗಾಜುಗಳು ಒಡೆದು ಬಲಭಾಗ ನುಜ್ಜುಗುಜ್ಜಾಗಿದೆ.
ಟಿಪ್ಪರ್ ಚಾಲಕ ಬಸಾಪೂರ ಮೂಲದ, ಸದ್ಯ ಆದರಳ್ಳಿಯಲ್ಲಿ ವಾಸವಾಗಿರುವ ಸಂತೋಷ ಲಕ್ಷ್ಮಣ ಪೂಜಾರ (24) ಎಂದು ತಿಳಿದುಬಂದಿದೆ. ಈತನಿಗೆ ಬಲಗಾಲು ಮುರಿದಿದ್ದು, ಖಾಸಗಿ ಬಸ್ ಚಾಲಕ ಸುರೇಶ ರಾಮಚಂದ್ರಪ್ಪ ಈತನಿಗೂ ಗ್ಲಾಸ್ ಸಿಡಿದು ಗಾಯಗಳಾಗಿವೆ. ಬಸ್ನಲ್ಲಿ 35ಕ್ಕೂ ಅಧಿಕ ಪ್ರಯಾಣಿಕರಿದ್ದು, ಗಾಯಗೊಂಡವರಿಗೆ ಲಕ್ಷ್ಮೇಶ್ವರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.