ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ ನಾಲ್ಕು ವರ್ಷ ಕಳೆದಿದೆ. ಆದರೆ ಇಂದಿಗೂ ಕೋಟ್ಯಾಂತರ ಮಂದಿ ಅಪ್ಪು ಅವರನ್ನು ನಿತ್ಯ ನೆನೆಯುತ್ತಿರುತ್ತಾರೆ. ಇದೀಗ ನಟ ಜಗ್ಗೇಶ್ ಅಪ್ಪಂದಿರ ದಿನಾಚರಣೆಯ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಕುಮಾರ್ ಅಂದು ಹೇಳಿದ ಮಾತುಗಳನ್ನು ನೆನಪು ಮಾಡಿಕೊಂಡಿದ್ದಾರೆ.
ಅಪ್ಪಂದಿರ ದಿನ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಜಗ್ಗೇಶ್ ಅವರು ಪುನೀತ್ ರಾಜ್ ಕುಮಾರ್ ಹೇಳಿದ ಮಾತುಗಳನ್ನು ವೇದಿಕೆ ಮೇಲೆ ಹೇಳಿದ್ದಾರೆ. ಅಪ್ಪು ಅಗಲುವ ಮುನ್ನ ಸುಮಾರು ₹60 ಕೋಟಿಯಷ್ಟು ವ್ಯವಹಾರ ಒಪ್ಪಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ ಆ ಮಾತು ಹೇಳಿದ ಕೆಲವೇ ದಿನಗಳಲ್ಲಿ ಅವರು ಎಲ್ಲವನ್ನೂ ಬಿಟ್ಟು ಹೋಗಿದ್ದರು ಎಂದು ಜಗ್ಗೇಶ್ ಹೇಳಿದ್ದಾರೆ.
“ವಿಶ್ವದಲ್ಲಿ ಏನಾದರೂ ಸಂಪಾದನೆ ಮಾಡಿ. ನೆನಪಿಡಿ ಭಗವಂತ ಎನ್ನುವಂತಹವನು ಒಂದೇ ಒಂದು ಚಿಟಿಕೆ ಹೊಡೆದಾಗ ಎಲ್ಲವನ್ನೂ ಎಲ್ಲಿರುತ್ತೆ ಅಲ್ಲೇ ಬಿಟ್ಟು ತೊಲಗಿ ಹೋಗುತ್ತಿರಬೇಕು. ಯಾವುದು ನಮ್ಮದು? ಯಾವ ಹೆಸರು ನಮ್ಮದು? ಯಾವಾಗಲೂ ಕೂತುಕೊಂಡರೂ ನನ್ನ ಭಾಗಕ್ಕೆ ಪುನೀತ್ ದೊಡ್ಡ ಸಂತನಾಗಿ ಕಾಣಿಸಿಬಿಟ್ಟ. ಯಾಕೆ? ನನ್ನನ್ನು ಎಷ್ಟು ಪ್ರೀತಿಸುವಂತಹ ಜೀವ ಅದು.” ಎಂದು ವೇದಿಕೆ ಮೇಲೆ ಜಗ್ಗೇಶ್ ಭಾವುಕರಾದರು.
“ಅಂದು ನನ್ನನ್ನು ಭೇಟಿಯಾದ ಪುನೀತ್, ಅಣ್ಣ ನಿಮ್ಮ ಜೊತೆ ನಾನೊಂದು ವಿಷಯ ಹಂಚಿಕೊಳ್ಳಬೇಕು ಎಂದ. ಏನು ಹೇಳಪ್ಪ ಅಂದೆ. ಅಣ್ಣ ನಾನು ₹60 ಕೋಟಿಯಷ್ಟು ವ್ಯವಹಾರವನ್ನು ಒಪ್ಪಿಕೊಂಡಿದ್ದೀನಿ ಎಂದರು. ನನಗೆ ಬಹಳ ಖುಷಿಯಾಗಿತ್ತು. ಈ ವಿಷಯ ಕೇಳಿದರೆ ನಿಮ್ಮ ಅಪ್ಪ ಎಷ್ಟು ಖುಷಿ ಪಡುತ್ತಾನೆ. ನಿಮ್ಮ ಅಪ್ಪ ಇರಬೇಕಾಗಿತ್ತು. ನಿಮ್ಮ ಅಪ್ಪ ಸಾವಿರ ರೂಪಾಯಿಗಳಲ್ಲಿ ತಗೊಂಡು ತಗೊಂಡು ವರ್ಷಾನುಗಟ್ಟಲೆ ಕೆಲಸ ಮಾಡಿ, ಯಾವಾಗೋ ಯಾರೋ ಒಂದು ಲಕ್ಷ ಕೊಟ್ಟಾಗ ಉಬ್ಬಿ ಹಿಗ್ಗಿ ಹೀರೆಕಾಯಿ ಆಗಿಬಿಟ್ಟಿದ್ದ. ಅವರ ಮಗ ನೀನು. ಈಗ ಎಷ್ಟು ಚೆನ್ನಾಗಿ ಸಂಪಾದನೆ ಮಾಡಿದ್ದೀಯ ಅಂದೆ.” ಎಂದು ಅಂದು ಅಪ್ಪು ಹಾಗೂ ತನ್ನ ನಡುವೆ ನಡೆದ ಮಾತುಕತೆಯನ್ನು ಜಗ್ಗೇಶ್ ವೇದಿಕೆ ಮೇಲೆ ನೆನಪು ಮಾಡಿಕೊಂಡರು.
“ಒಂದು 20 ದಿನ ಆದ್ಮೇಲೆ ಅಣ್ಣ ನಾನು ಮಲ್ಲೇಶ್ವರಕ್ಕೆ ಬಂದಿದ್ದೀನಿ. ನಾನು ಎಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತೇನೋ. ಅವನು ಅಲ್ಲಿಗೆ ಬಂದಿದ್ದ. ಏನಾಯ್ತಪ್ಪ ಅಂದೆ, ಇಲ್ಲ ಹೋಮಕ್ಕೆ ಕೂತಿದ್ದೆ. ಯಾಕೋ ತುಂಬಾನೇ ನೋವು ಬಂದುಬಿಟ್ಟಿದೆ ಎಂದು ಟ್ರೀಟ್ಮೆಂಟ್ ತಗೊಂಡ. ನಾನು ಆಚೆ ಹೋಗುವುದಕ್ಕೆ ಬಂದೆ. ಏನಕ್ಕೆ ಆಚೆ ಹೋಗುತ್ತೀರ ಅಂದ. ಟ್ವೀಟ್ಮೆಂಟ್ ತಗೋತಿದ್ದೀಯ ಅದಕ್ಕೆ ಅಂದೆ. ಅದಕ್ಕೆ ಅವನು ಬನ್ನಿ ಅಣ್ಣ ನಿಮಗೆ ಇರೋದೇ ನನಗೂ ಇರೋದು ಅಂದ. ಸರಿ ಅಂದು ನನಗೆ ಕತ್ತು. ಅವನಿಗೆ ಟ್ರೀಟ್ಮೆಂಟ್ ಅಯ್ತು. ಬೆಳಗ್ಗೆ ಅವನು ಇಲ್ಲ.” ಎಂದು ಪುನೀತ್ ರಾಜ್ ಕುಮಾರ್ ಬಗ್ಗೆ ಜಗ್ಗೇಶ್ ಹೇಳಿದ್ದಾರೆ.