ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಸಿನಿಮಾದ ಸುದ್ದಿ ಇದೀಗ ವಿವಾದಕ್ಕೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ಸಾಲು ಮರದ ತಿಮ್ಮಕ್ಕ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ನಿನ್ನೆ ತಾನೇ ಸಾಲು ಮರದ ತಿಮ್ಮಕ್ಕ ಸಿನಿಮಾ ಮಾಡಲು ತನ್ನ ಅನುಮತಿ ಪಡೆದಿಲ್ಲ ಎಂದು ಅವರ ಮೊಮ್ಮಗ ಆರೋಪಿಸಿದ್ದರು. ಆ ಬೆನ್ನಲ್ಲೇ ಇದೀಗ ತಮ್ಮ ಕುರಿತು ಸಿನಿಮಾ ಮಾಡದಂತೆ ಸಾಲುಮರದ ತಿಮ್ಮಕ್ಕ ಹಾಗೂ ತಂಡ ಫಿಲಂ ಚೇಂಬರ್ ಗೆ ದೂರು ನೀಡಿದ್ದಾರೆ.
‘ವೃಕ್ಷ ಮಾತೆ’ ಟೈಟಲ್ ನಲ್ಲಿ ‘ಶ್ರೀಲಕ್ಷ್ಮಿ ವೆಂಕಟೇಶ್ವರ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಒರಟ ಶ್ರೀ ನಿರ್ದೇಶನದಲ್ಲಿ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಚಿತ್ರ೫ದಲ್ಲಿ ನೀನಾಸಂ ಅಶ್ವತ್, ಎಂ.ಕೆ ಮಠ ಸೇರಿಂತೆ ಹಲವು ಕಲಾವಿದರು ಅಭಿನಯ ಮಾಡುತ್ತಿದ್ದರು. ಇದೀಗ ಸಾಲು ಮರದ ತಿಮ್ಮಕ್ಕ ತಮ್ಮ ಜೀವನದ ಕುರಿತು ಸಿನಿಮಾ ಮಾಡದಂತೆ ದೂರು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಲುಮರದ ತಿಮ್ಮಕ್ಕ ಅವ್ರ ಸಾಕು ಮಗ ಉಮೇಶ್, ‘ಸಾಲುಮರದ ತಿಮ್ಮಕ್ಕ ಅವ್ರ ಬಯೋಪಿಕ್ ಮಾಡೋದಾಗಿ ಸಾಕಷ್ಟು ನಿರ್ದೇಶಕರು ಬಂದಿದ್ದರು. ಆದರೆ, ನಾವು ಮಾಡೋದು ಬೇಡ ಎಂದು ಹೇಳಿದ್ದೇವೆ. ದಿಲೀಪ್ ಕೂಡ ಸಿನಿಮಾ ಮಾಡುತ್ತೇನೆ ಎಂದಿದ್ದರು. ಅವರಿಗೂ ಬೇಡ ಎಂದು ಹೇಳಿದ್ದೆವು. ಈ ತಂಡಕ್ಕೆ ನಾವು ಸಿನಿಮಾ ಮಾಡೋಕೆ ಬಿಡುವುದಿಲ್ಲ’. ಸಾಲು ಮರದ ತಿಮ್ಮಕ್ಕ ಅವರ ಕೃತಿಯಾಧಾರಿತವಾಗಿ ಸಿನಿಮಾ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆ ಕೃತಿ ಕೂಡ ಸರಿಯಾಗಿಲ್ಲ ಎಂದು ಹೇಳಿದ್ದಾರೆ ಎಂದಿದ್ದಾರೆ.
ಶೂಟಿಂಗ್ ಮಾಡದಂತೆ ಕುದೂರಿನ ಠಾಣೆಯಲ್ಲಿ ದೂರು ನೀಡಲಾಗಿತ್ತು. ಚಿತ್ರೀಕರಣ ಮಾಡೋಕೆ ನಾವು ಅನುಮತಿ ಕೊಟ್ಟಿಲ್ಲ. ಈ ತಂಡಕ್ಕೆ ನಾವು ಸಿನಿಮಾ ಮಾಡೋಕೆ ಬಿಡಲ್ಲ. 25 ಲಕ್ಷ ಹಣ ಹಾಗೂ ಇನ್ನೋವಾ ಕಾರು ಕೇಳಿರುವ ಆರೋಪವಿದೆ. ಆದರೆ ನಾವು ಯಾರ ಬಳಿಯೂ ಹಣ, ಕಾರು ಕೇಳಿಲ್ಲ. ಅವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ‘ಸಾಲುಮರದ ತಿಮ್ಮಕ್ಕ ಇವತ್ತು ಬಂದು ದೂರು ಕೊಟ್ಟಿದ್ದಾರೆ. ನಮ್ಮ ಅನುಮತಿ ಇಲ್ಲದೇ ಸಿನಿಮಾ ಮಾಡ್ತಿದಾರೆ ಎಂದು ಹೇಳಿದ್ದಾರೆ. ಇಲ್ಲಿ ವೃಕ್ಷಮಾತೆ ಸಿನಿಮಾ ರಿಜಿಸ್ಟರ್ ಆಗಿಲ್ಲ. ಸಿನಿಮಾ ತಂಡವನ್ನು ಕರೆದು ಮಾತನಾಡುತ್ತೇವೆ. ಸಾಲುಮರದ ತಿಮ್ಮಕ್ಕ ಅವ್ರಿಗೆ ನಾವು ಸ್ಪಂದಿಸುತ್ತೇವೆ’ ಎಂದಿದ್ದಾರೆ.